ಕೇರಳದಲ್ಲಿ ಸಮುದ್ರ ಪಾಲಾದ ಮಡಿಕೇರಿಯ ಯುವಕ
Update: 2023-01-14 13:16 GMT
ಮಡಿಕೇರಿ: ಶಬರಿಮಲೆಗೆ ತೆರಳಿದ್ದ ಮಡಿಕೇರಿ ನಗರದ ಯುವಕನೊಬ್ಬ ಮರಳುವ ಸಂದರ್ಭ ಕಣ್ಣೂರ್ ಬೀಚ್ ಗೆ ತೆರಳಿದ್ದು, ಈ ಸಂದರ್ಭ ಸಮುದ್ರದಲೆಗೆ ಸಿಲುಕಿ ನೀರುಪಾಲಾದ ಘಟನೆ ಕೇರಳದ ಕಣ್ಣೂರ್ ಬೀಚ್ ನಲ್ಲಿ ನಡೆದಿದೆ.
ನಗರದ ಸುದರ್ಶನ ಬಡಾವಣೆ ನಿವಾಸಿ ಲೋಕೇಶ್ ಎಂಬವರ ಪುತ್ರ ಶಶಾಂಕ್ (25) ಮೃತಪಟ್ಟ ಯುವಕ.
ಶಬರಿಮಲೆಯಿಂದ ಮರಳುವಾಗ ಯುವಕರ ತಂಡ ಕೇರಳದ ಕಣ್ಣೂರ್ ಬೀಚ್ ಗೆ ಭೇಟಿ ನೀಡಿತ್ತು. ಇತರ ಯುವಕರೊಂದಿಗೆ ಈಜಲು ತೆರಳಿದ್ದ ಸಂದರ್ಭ ಶಶಾಂಕ್ ಸಮುದ್ರದಲೆಗಳಿಗೆ ಸಿಲುಕಿಕೊಂಡರು ಎಂದು ಹೇಳಲಾಗಿದೆ. ತಕ್ಷಣ ಅವರನ್ನು ರಕ್ಷಿಸುವ ಪ್ರಯತ್ನ ಮಾಡಲಾಯಿತಾದರೂ ಶಶಾಂಕ್ ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ.
ಮೃತ ಯುವಕ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.