ಶಿವಮೊಗ್ಗ | ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಗೂಳಿ ತಿವಿದು ಇಬ್ಬರು ಯುವಕರು ಮೃತ್ಯು

Update: 2023-01-16 08:29 GMT

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯ ಸಂದರ್ಭ ಸ್ಪರ್ಧೆ ವೀಕ್ಷಿಸುತ್ತಿದ್ದ ಇಬ್ಬರು ಯುವಕರು ಗೂಳಿಯ ತಿವಿತಕ್ಕೊಳಗಾಗಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

ಶಿಕಾರಿಪುರ ತಾಲೂಕು ಮಳೂರು ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ವೀಕ್ಷಿಸುತ್ತಿದ್ದ ರಂಗನಾಥ್ (24) ಹಾಗೂ ಶಿವಮೊಗ್ಗ ತಾಲೂಕಿನ ಕೊನಗವಳ್ಳಿಯಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸುತ್ತಿದ್ದ ಆಲ್ಕೊಳದ ಲೋಕೇಶ್(34) ಎಂಬವರು ಮೃತಪಟ್ಟವರಾಗಿದ್ದಾರೆ.

ಮಳೂರು ಗ್ರಾಮದಲ್ಲಿ ಆಯೋಜಸಿದ್ದ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡುತ್ತಾ ನಿಂತಿದ್ದ ವೇಳೆ ಏಕಾಏಕಿ ನುಗ್ಗಿದ ಗೂಳಿ ರಂಗನಾಥ್ ಗೆ ತಿವಿದು ಗಂಭೀರವಾಗಿ ಗಾಯಗೊಳಿಸಿತ್ತು. ಕೂಡಲೇ ಅವರನ್ನು ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರಂಗನಾಥ್ ಸಾವನ್ನಪಿದ್ದಾರೆ.

ಮತ್ತೊಂದು ಘಟನೆಯಲ್ಲಿ ಶಿವಮೊಗ್ಗ ತಾಲೂಕಿನ ಕೊನಗವಳ್ಳಿಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸುತ್ತಿದ್ದ ಶಿವಮೊಗ್ಗದ ಆಲ್ಕೊಳದ ಲೋಕೇಶ್ ಹೋರಿಯ ತಿವಿತಕ್ಕೆ ಒಳಗಾಗಿದ್ದರು. ಸ್ಪರ್ಧೆ ವೀಕ್ಷಿಸುತ್ತಿದ್ದ ಜನರತ್ತ ನೇರವಾಗಿ ನುಗ್ಗಿದ ಹೋರಿ ಲೋಕೇಶ್ ರಿಗೆ ತಿವಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಲೋಕೇಶ್ ರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರೆನ್ನಲಾಗಿದೆ.

Similar News