ಶಿವಮೊಗ್ಗ: ಸೈಕಲ್ ಸವಾರಿ ಮಾಡುತ್ತಿದ್ದ ಬಾಲಕನ ಮೇಲೆ ಗೂಳಿ ದಾಳಿ

Update: 2023-01-17 05:53 GMT

ಶಿವಮೊಗ್ಗ, ಜ.17: ಸೈಕಲ್ ಸವಾರಿ ಮಾಡುತ್ತಿದ್ದ ಏಳು ವರ್ಷದ ಬಾಲಕನೋರ್ವನ ಮೇಲೆ ಬಿಡಾಡಿ ಗೂಳಿಯೊಂದು ದಾಳಿ ನಡೆಸಿದ ಘಟನೆ ನಗರದ ಗೋಪಿಶೆಟ್ಟಿಕೊಪ್ಪದಲ್ಲಿ ಸೋಮವಾರ ಸಂಜೆ ನಡೆದಿದೆ. ಇದರ ದೃಶ್ಯಾವಳಿ ಸಮೀಪದ ಸಿಸಿಟಿವಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ.

ಸ್ಥಳೀಯ ನಿವಾಸಿ ಸನತ್ (7) ಗೂಳಿ ದಾಳಿಗೊಳಗಾದ ಬಾಲಕ. ಈತ ಮನೆ ಸಮೀಪದ ಅಂಗಡಿಗೆ ಸೈಕಲ್ ನಲ್ಲಿ ತೆರಳಿ ಹಾಲು ತರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಬಿಡಾಡಿ ಗೂಳಿ ಏಕಾಏಕಿ ದಾಳಿ ಮಾಡಿದೆ. ಸನತ್ ನನ್ನು ಕೊಂಬಿನಿಂದ ಎತ್ತಿ ಬಿಸಾಕಿ, ತಿವಿದಿದೆ. ತಕ್ಷಣ ಸ್ಥಳೀಯರು ಬಾಲಕನನ್ನು ಗೂಳಿಯಿಂದ ರಕ್ಷಿಸಿದ್ದಾರೆ.

ಬಾಲಕನಿಗೆ ತಲೆ, ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Similar News