ರಾಜ್ಯದಲ್ಲಿ ನಾಳೆಯೇ ಚುನಾವಣೆ ನಡೆದರೆ 'ಕೈ' ಅಧಿಕಾರಕ್ಕೆ: ಶಾಸಕ ಶಾಮನೂರು ಶಿವಶಂಕರಪ್ಪ

Update: 2023-01-17 14:55 GMT

ದಾವಣಗೆರೆ, ಜ.17: ರಾಜ್ಯದಲ್ಲಿ ಬಿಜೆಪಿ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ನಾಳೆಯೇ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ನಗರದ ಹೈಸ್ಕೂಲ್ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಆಡಳಿತದಲ್ಲಿ ದಿನಕ್ಕೊಂದು ಶಾಸಕರ ಹಗರಣಗಳು ಬಯಲಿಗೆ ಬರುತ್ತಿವೆ. ಈ ಸರಕಾರದಲ್ಲಿ ಕಮಿಷನ್ ದಂಧೆ ಜಾಸ್ತಿಯಾಗಿದೆ. ಸ್ಯಾಂಟ್ರೋ ರವಿ ಪ್ರಕರಣ, ಪಿಎಸ್‍ಐ ಹಗರಣ, ಬೆಲೆ ಏರಿಕೆ, 2 ಕೋಟಿ ಉದ್ಯೋಗ ನೀಡುವ ಅಮಿಷ, ಕೋವಿಡ್ ಸಮಯದಲ್ಲಿ ಜನರ ಲೂಟಿ, ಹೀಗೆ ಹಲವಾರು ಭ್ರಷ್ಟಚಾರದಲ್ಲಿ ಮುಳುಗಿರುವ ಸರಕಾರ ಅಭಿವೃದ್ಧಿ ಶೂನ್ಯವಾಗಿದೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ ಎಂದರು.

ದಕ್ಷಿಣದಲ್ಲಿ  ಅತಿ ಹೆಚ್ಚು ಮತ : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಭಾಗದಲ್ಲಿ  ಕಾಂಗ್ರೆಸ್‍ಗೆ ರಾಜ್ಯದಲ್ಲಿ ಅತಿ ಹೆಚ್ಚು ದಾಖಲೆಯ ಮತಗಳು ಬರಲಿವೆ. ಅಕಾಂಕ್ಷಿಗಳು ಎಷ್ಟೇ ಬರಲಿ. ಇದಕ್ಕೆ ಪಕ್ಷದ ಕೆಲ ಮಾನದಂಡ ಇವೆ. ಅದರಂತೆ ಪಕ್ಷ ಸರ್ವೇ ಮಾಡಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೇಟ್ ನೀಡಲಿದೆ. ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ಶಾಸಕ ರಾಮಪ್ಪ, ಮಾಜಿ ಶಾಸಕರಾದ ಶಾಂತನಗೌಡ, ಹೆಚ್.ಪಿ.ರಾಜೇಶ್, ತೇಜಸ್ವಿ ಪಟೇಲ್,  ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ ಶೆಟ್ಟಿ, ಎಸ್.ಮಲ್ಲಿಕಾರ್ಜುನ್,  ಆಯೂಬ್ ಪೈಲ್ವಾನ್, ಬಸವಂತಪ್ಪ, ಶಾಮನೂರು ಬಸವರಾಜ್, ಪಾಲಿಕೆ ವಿಪಕ್ಷ ನಾಯಕ ಮಂಜುನಾಥ ಗಡಿಗುಡಾಳ್, ಕೆ.ಜಿ.ಶಿವಕುಮಾರ್, ಪರಶುರಾಮ್, ಮುದೇಗೌಡ್ರ ಗೀರೀಶ್ ಸೇರಿದಂತೆ ಇತರರು ಇದ್ದರು.

Similar News