ಸಿಂದಗಿ: ಜೆಡಿಎಸ್ ಅಭ್ಯರ್ಥಿ ಹೃದಯಾಘಾತದಿಂದ ನಿಧನ

Update: 2023-01-21 03:02 GMT

ಸಿಂದಗಿ : ಸಿಂದಗಿ ವಿಧಾನ ಸಭೆ  ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಸೋಮಜಾಳ (55)  ಅವರು ಶುಕ್ರವಾರ ರಾ‍ತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿಜಯಪುರ ನಗರದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡ ಅವರು, ಮಧ್ಯಾಹ್ನ  ಸಮಾವೇಶ ಮುಗಿಸಿಕೊಂಡು ಸಿಂದಗಿಗೆ ವಾಪಾಸ್ ಆಗಿದ್ದರು. ರಾತ್ರಿ 9 ಗಂಟೆಯ ವೇಳೆಗೆ ಸಿಂದಗಿಯಲ್ಲಿ ಪರಿಚಯಸ್ಥರ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಏಕಾಏಕಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆವೇಳೆಗಾಗಲೇ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.

ಮೃತರು ಪುತ್ರ, ಪುತ್ರಿ ಹಾಗೂ ಪತ್ನಿಯನ್ನು  ಅಗಲಿದ್ದಾರೆ.

ಎಚ್ ಡಿಕೆ  ಸಂತಾಪ 

ಸಿಂದಗಿ ವಿಧಾನಸಭೆ ಕ್ಷೇತ್ರದ @JanataDal_S ಪಕ್ಷದ ಅಭ್ಯರ್ಥಿ ಶ್ರೀ ಶಿವಾನಂದ ಪಾಟೀಲ ಅವರ ಅಕಾಲಿಕ ಮರಣ ನನಗೆ ತೀವ್ರ ಆಘಾತ ಉಂಟು ಮಾಡಿದೆ.

ಜ.18ರಂದು ಇಡೀ ದಿನ ಅವರು ನನ್ನೊಂದಿಗೆ ಸಿಂದಗಿ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮರುದಿನ ಯಾತ್ರೆಯೊಂದಿಗೆ ನನ್ನನ್ನು ಆತ್ಮೀಯವಾಗಿ ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಬೀಳ್ಕೊಟ್ಟಿದ್ದರು. ನಿನ್ನೆ ಮಧ್ಯಾಹ್ನವೂ ಮತ್ತೆ ನಾಗಠಾಣ ಕ್ಷೇತ್ರದ ಯಾತ್ರೆಯಲ್ಲಿ ಭಾಗವಹಿಸಿದ್ದರು.

ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಶ್ರೀ ಪಾಟೀಲರು, ಸಮಾಜ ಸೇವೆಯ ಅದಮ್ಯ ಹಂಬಲ ಹೊಂದಿದ್ದರು. ಅತ್ಯುತ್ತಮ ಸಂಘಟನಾ ಶಕ್ತಿ, ಕ್ರಿಯಾಶೀಲತೆ  ಹೊಂದಿದ್ದ ಅವರು ಪರಿಚಯವಾದ ಅಲ್ಪಕಾಲದಲ್ಲಿಯೇ ನನಗೆ ಅತ್ಯಂತ ಆತ್ಮೀಯರಾಗಿದ್ದರು.

ಶ್ರೀ ಶಿವಾನಂದ ಪಾಟೀಲರ ಅಗಲಿಕೆ ನನಗೆ ವೈಯಕ್ತಿಕವಾಗಿ ಅತೀವ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Similar News