ಸುಮಲತಾ ಅಂಬರೀಷ್ ಬಿಜೆಪಿ ಸೇರಿದರೆ ಪಕ್ಷಕ್ಕೆ ಬಲ: ಸಿ.ಟಿ.ರವಿ

''ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣ ಬಿಜೆಪಿ ಅಭ್ಯರ್ಥಿಯಾಗಲಿ...''

Update: 2023-01-27 13:33 GMT

ಚಿಕ್ಕಮಗಳೂರು, ಜ.27: 'ಪಕ್ಷದ ನೀತಿಯನ್ನು ಒಪ್ಪಿಕೊಂಡು ಯಾರ್ಯಾರು ಬರುತ್ತಾರೋ ಬರಬಹುದು, ಸುಮಲತಾ ಅವರು ಅತ್ಯಂತ ಜನಪ್ರಿಯ ವ್ಯಕ್ತಿ. ಪಕ್ಷೇತರ ಅಭ್ಯರ್ಥಿಯಾಗಿ ಘಟಾನುಘಟಿಗಳ ಎದುರು ಗೆದ್ದು ಬಂದವರು. ಅವರು ಪಕ್ಷ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬರುತ್ತದೆ. ಯಾವಾಗ ಸೇರ್ಪಡೆಗೊಳ್ಳುತ್ತಾರೆಂಬ ಮಾಹಿತಿ ಇಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. 

ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, 'ಪಕ್ಷ ನೀತಿ ಒಪ್ಪಿಕೊಂಡು ಬರುವವರನ್ನು ಸ್ವೀಕರಿಸುತ್ತೇವೆ. ಆಸೆ ಆಮಿಷಗಳನ್ನು ಒಡ್ಡಿ ಪಕ್ಷಕ್ಕೆ ಸೇರ್ಪಡಿಸಿಕೊಳ್ಳುವುದಿಲ್ಲ. ಬೂತ್‍ ಹಂತದಿಂದ ಪಕ್ಷಕ್ಕೆ ಬರುವವರನ್ನು ಸೇರಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಬೇರೆ ಪಕ್ಷಗಳ ಅನೇಕ ನಾಯಕರು ಪಕ್ಷದ ಸಂಪರ್ಕದಲ್ಲಿದ್ದಾರೆ. ಈಗಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ' ಎಂದು ಪ್ರತಿಕ್ರಿಯಿಸಿದರು.

ಜೆಡಿಎಸ್ ಪಕ್ಷದಲ್ಲಿ ನಡೆಯುತ್ತಿರುವ ಹಾಸನದ  ಟಿಕೆಟ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು,  ನನ್ನ ಮನಸ್ಸಿನಲ್ಲಿ ಭವಾನಿ ಅಕ್ಕ ನಮ್ಮ ಪಾರ್ಟಿಯಿಂದ ಅಭ್ಯರ್ಥಿಯಾಗಬೇಕೆಂದು ಅನಿಸಿತ್ತು. ಭವಾನಿ ಅಕ್ಕ ಹೊಳೆನರಸೀಪುರಕ್ಕೆ ನಮ್ಮ ಪಕ್ಷದ ಅಭ್ಯರ್ಥಿಯಾಗಲಿ. ಭವಾನಿಗಿಂತ ಉತ್ತಮ ಅಭ್ಯರ್ಥಿ ಹೊಳೆನರಸೀಪುರಕ್ಕೆ ಬೇರೋಬ್ಬರಿಲ್ಲ ಎಂದರು.

ಮಂಡ್ಯದಲ್ಲಿ ಶುರುವಾಗಿರುವ ಗೋಬ್ಯಾಕ್ ಅಶೋಕ್ ಅಭಿಯಾನಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಆರ್.ಅಶೋಕ್ ಅವರು ಪಕ್ಷದ ಹಿರಿಯ ನಾಯಕರು, ಪಕ್ಷದ ಬೆಳವಣಿಗೆಯಲ್ಲಿ ಅವರ ಪಾಲು ತುಂಬಾ ಇದೆ. ಏಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ. ರಾಜ್ಯಾಧ್ಯಕ್ಷರು ಗಮನಿಸುತ್ತಾರೆಂದರು. 

Similar News