ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿದ್ದರಾಮಯ್ಯ

Update: 2023-01-27 16:34 GMT

ಮೈಸೂರು,ಜ.27: ಮತದಾರರ ಆಶೀರ್ವಾದದಿಂದ ನಾವು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. 

ರಾಜ್ಯ ಕನ್ನಡ ಜಾನಪದ ಪರಿಷತ್ ಮತ್ತು ಮೈಸೂರು ಜಿಲ್ಲಾಘಟಕದ ವತಿಯಿಂದ ನಗರದಲ್ಲಿ ಇಂದುಹಮ್ಮಿಕೊಂಡಿದ್ದ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಡೊಳ್ಳುಬಾರಿಸಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಸಿದ್ದರಾಮಯ್ಯ ಅವರು ಜಾನಪದ ಲೋಕದಲ್ಲಿ ಸಾಧನೆಗೈದ ಹಲವರಿಗೆ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ನೀಡಿ ಗೌರವಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮಲ್ಲಿ ಜಾನಪದ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಹಾಸುಹೊಕ್ಕಾಗಿದೆ. ನಾನು ನಮ್ಮೂರಲ್ಲಿ ವೀರಮಕ್ಕಳ ಕುಣಿತ ಮಾಡುತ್ತಿದ್ದೆ ಅದಕ್ಕಾಗಿ ಶಾಲೆಗೆ ಹೋಗದೆ ವೀರಮಕ್ಕಳ ಕುಣಿತಕ್ಕೆ ಹೋಗುತ್ತಿದ್ದೆ. ಅದೇ  ನಮ್ಮ ಅಪ್ಪನಿಗೆ ಮುಖ್ಯವಾಗಿತ್ತು ಎಂದು ಹೇಳಿದರು.

ನಮ್ಮೂರಿನ ನಂಜೇಗೌಡರಿಂದ ಅಕ್ಷರ ಅಭ್ಯಾಸ ಮಾಡಿದೆ. ಚೆನ್ನಾಗಿ ಓದುವುದು, ಬರೆಯುವುದು ಕಲಿತಿದ್ದೆ. ಹಾಗಾಗಿ ನಮ್ಮೂರಿನ ರಾಜಪ್ಪ ಮೇಷ್ಟ್ರು ನೇರವಾಗಿ ನನ್ನನ್ನು 5ನೇ ತರಗತಿಗೆ ಸೇರಿಸಿದರು. ಅಲ್ಲಿಂದ ನಾನು ಓದಿ ಬೆಳೆದು ಇಲ್ಲಿವರೆಗೆ ಬಂದಿದ್ದೇನೆ ಎಂದು ತಮ್ಮ ಜೀವನದ ಹಾದಿಯನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Similar News