ತಂತ್ರಜ್ಞಾನ ಅಭಿವೃದ್ಧಿ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಧಾರವಾಡದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ

Update: 2023-01-28 13:47 GMT

ಬೆಂಗಳೂರು, ಜ. 28: ಅಪರಾಧ ಕೃತ್ಯಗಳನ್ನು ಸಾಭೀತುಪಡಿಸಲು ಥರ್ಡ್ ಡಿಗ್ರಿ ಟ್ರಿಟ್‍ಮೆಂಟ್ ಕಾಲಈಗಿಲ್ಲ. ಆದರೆ, ಕಾನೂನಾತ್ಮಕವಾಗಿ ಆರೋಪಿಗೆ ಶಿಕ್ಷೆ ಆಗುವಂತೆ ಮಾಡಲು ವಿಧಿ ವಿಜ್ಞಾನ ಆಧಾರಿತ ಸಾಕ್ಷ್ಯ ಸಂಗ್ರಹ ಅಗತ್ಯ. ಈ ನಿಟ್ಟಿನಲ್ಲಿ ವಿಧಿ ವಿಜ್ಞಾನ ವಿವಿಗಳ ಸ್ಥಾಪನೆಯೂ ಸಹಕಾರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ರಾಷ್ಟೀಯ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದ 9ನೆ ಕ್ಯಾಂಪಸ್‍ಗೆ ಭೂಮಿಪೂಜೆ ನೆರವೇರಿಸಿಮಾತನಾಡಿದ ಅವರು, ದೇಶದಲ್ಲಿ ಸದ್ಯಲ್ಲಿರುವ ಭಾರತೀಯ ದಂಡ ಸಂಹಿತೆ(ಐಪಿಸಿ), ಸಿಆರ್‍ಪಿಸಿ, ಸಾಕ್ಷ್ಯ ಸಂಗ್ರಹ ಕಾಯ್ದೆಗಳಿಗೆ ಅಗತ್ಯ ತಿದ್ದುಪಡಿ ತರುವುದರ ಜತೆಗೆ, ವಿಧಿ ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಿಸಲಾಗುವುದು ಎಂದು ಹೇಳಿದರು.

ಕೇಂದ್ರ ಗೃಹಸಚಿವ ಲಾಲ್‍ಕೃಷ್ಣ ಅಡ್ವಾಣಿ ಅವರು 2002ರಲ್ಲಿ ಮೊದಲಬಾರಿಗೆ ವಿಧಿ ವಿಜ್ಞಾನ ನಿರ್ದೇಶನಾಲಯ ಆರಂಭಿಸಿದರು. ಅದರ ಆಧಾರದಲ್ಲಿ ಗುಜರಾತ್ ಸಿಎಂ ಆಗಿದ್ದ ಮೋದಿ ಅವರು ವಿಧಿ ವಿಜ್ಞಾನ ಪ್ರಯೋಗಾಲಯ ಆರಂಭಿಸುವ ಯೋಜನೆ ರೂಪಿಸಿದರು. ಮೂಲಸೌಕರ್ಯ ಕಲ್ಪಿಸಿದರೂ ತಜ್ಞರ ಕೊರತೆ ಎದುರಾಯಿತು. ಇದನ್ನು ನಿಗಿಸಲು ವಿಧಿ ವಿಜ್ಞಾನ ವಿಷಯ ಕೋರ್ಸ್ ಆರಂಭಿಸಲು ಗುಜರಾತ್ ಸರಕಾರ ನಿರ್ಧರಿಸಿ ವಿವಿ ಆರಂಭಿಸಿತು ಎಂದು ಅವರು ವಿವರಿಸಿದರು.

ಆದರೆ, ವಿವಿಯಿಂದ ಹೊರ ಬರುತ್ತಿರುವ ಪರಿಣಿತರ ಸಂಖ್ಯೆ ಕಡಿಮೆ ಇದ್ದ ಕಾರಣ ವಿವಿಧ ರಾಜ್ಯಗಳಲ್ಲಿ ವಿವಿಗಳ ಕ್ಯಾಂಪಸ್ ನಿರ್ಮಾಣ ಮಾಡಲಾಗಿದೆ. ಇದರಿಂದ ದೇಶದ ವಿಧಿ ವಿಜ್ಞಾನ ಕ್ಷೇತ್ರಕ್ಕೆ ಆಗತ್ಯ ಇರುವ 8ರಿಂದ 10 ಸಾವಿರ ತಜ್ಞರು ಸಿಗಲಿದ್ದಾರೆ ಎಂದ ಅವರು, ವಿಧಿ ವಿಜ್ಞಾನ ಕೋರ್ಸ್ ಮೂಲಕ 12ನೆ ತರಗತಿ ನಂತರ ಈ ಕೋರ್ಸ್ ಕಲಿಯಬಹುದು. ಇದರಿಂದ ಶೇ.100 ರಷ್ಟು ಉದ್ಯೋಗ ಖಾತ್ರಿ ಇರಲಿದೆ ಎಂದು ಹೇಳಿದರು.

ಜಗತ್ತಿನ ಇತರ ರಾಷ್ಟ್ರಗಳ ಸಮನಾಗಿ ನಿಲ್ಲಬೇಕಾದರೆ ದೇಶದ ವಿಧಿ ವಿಜ್ಞಾನ ಕ್ಷೇತ್ರ ಬಲಿಷ್ಠಗೊಳಿಸಬೇಕು. ಅದಕ್ಕೆ ಅಗತ್ಯವಿರುವ ತಜ್ಞರನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಾರಂಭವಾದ ಧಾರವಾಡದ ಈ ವಿವಿ ಕ್ಯಾಂಪಸ್ ರಾಜ್ಯದ ವಿದ್ಯಾರ್ಥಿಗಳಿಗೆ ಹೊಸ ಅವಕಾಶ ಹಾಗೂ ಪೊಲೀಸ್ ವ್ಯವಸ್ಥೆ ಬಲಿಷ್ಠಗೊಳಿಸಲು ಸಹಕಾರಿ ಎಂದು ಅಮಿತ್ ಶಾ ನುಡಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಕುಲಪತಿ ಡಾ.ವ್ಯಾಸ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ. ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನಿಶ್ ಗೊಯಲ್, ರಾಜ್ಯ  ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Similar News