ಈ ಬಾರಿ ರೈತರ, ಬಡ ಜನ ಪರವಾಗಿರುವ ಬಜೆಟ್: ಸಿಎಂ ಬೊಮ್ಮಾಯಿ‌

Update: 2023-01-29 05:14 GMT

ಹಾವೇರಿ, ಜ.29: ಈ ವರ್ಷದ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ, ಜನಪರವಾಗಿರುತ್ತದೆ. ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

 ಶಿಗ್ಗಾಂವನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.

ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ತೆಗೆದುಕೊಂಡಾಗ 5 ಸಾವಿರ ಕೋಟಿ ರೂ. ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ದಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು  ತುಂಬಿರುವುದಲ್ಲದೇ, 13 ಸಾವಿರ ಕೋಟಿ ರೂ. ಅಧಿಕವಾಗಿ ಸಂಗ್ರಹ ಮಾಡಿದ್ದೇವೆ.‌ 72 ಸಾವಿರ ಕೋಟಿ ರೂ. ಸಾಲ ತೆಗೆದುಕೊಳ್ಳುವ ಅವಕಾಶ ಇದ್ದರೂ ನಾವು ಕೇವಲ 61 ಸಾವಿರ ಕೋಟಿ ರೂ.ಗೆ ಮಿತಿಗೊಳಿಸಿದ್ದೇವೆ.‌ ಈ ವರ್ಷವೂ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ. ನಾವು ಈ ವರ್ಷ 61 ಸಾವಿರಕ್ಕೆ ಮಿತಿಗೊಳಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದರು.

ಹತ್ತು ಹಲವಾರು ವರ್ಷಗಳಿಂದ ಸರ್ಕಾರಗಳು ಮಾಡಿರುವ ಸಾಲವನ್ನು ತೀರಿಸುವ ಹೊಣೆಗಾರಿಕೆ ನಮ್ಮ ಮೇಲೆ ಇದೆ. ಕೇವಲ 9% ರಾಜ್ಯದ ಅಭಿವೃದ್ಧಿ ಆಗುತ್ತಿದೆ. ಅದರ ಗತಿಯನ್ನಿಟ್ಟುಕೊಂಡು ಸಾಮಾಜಿಕವಾಗಿ ಅಭಿವೃದ್ಧಿ ಮಾಡಿ ಸಮತೋಲನ ಮಾಡಿಕೊಳ್ಳುವ ಅವಶ್ಯಕತೆಯಿದೆ. ಮುಂದಿನ ಎರಡು, ಮೂರು ವರ್ಷ ಸಮತೋಲನ ಕಾಪಾಡಿಕೊಂಡರೆ ಇನ್ನಷ್ಟು ಆದಾಯ ಬರುವ ನಿರೀಕ್ಷೆಯಿದೆ ಎಂದು ಸಿಎಂ ನುಡಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯವನ್ನು ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಈ ವರ್ಷ 8,101 ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಅವೆಲ್ಲವೂ ಮೇ, ಜೂನ್ ವೇಳೆಗೆ ನಿರ್ಮಾಣ ಆಗುತ್ತವೆ. ಅದೇ ವೇಗವನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಹೋಗುತ್ತೇವೆ. ಆರೋಗ್ಯ ಕ್ಷೇತ್ರದಲ್ಲಿ ನಾವು ಪ್ರಗತಿಯಲ್ಲಿ ಹೋಗುತ್ತಿದ್ದೇವೆ. ನಮ್ಮ ಪ್ರಾತಿನಿಧ್ಯ ಆರೋಗ್ಯ, ಶಿಕ್ಷಣದ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲದಕ್ಕೂ ಇರುತ್ತದೆ.

ಚುನಾವಣೆಯ ಪ್ರಭಾವ ಬಜೆಟ್ ಮೇಲೆ ಇರುತ್ತದೆ. ನಾವು ಕೋವಿಡ್ ನಂತರದಲ್ಲಿ ಏನು ಆರ್ಥಿಕವಾಗಿ ಮುಂದೆ ಹೋಗುತ್ತಿದ್ದೇವೆ. ಅದನ್ನು ಮುಂದುವರಿಸಿಕೊಂಡು ಹೋಗುವುದು ರಾಜ್ಯದ ಅಭಿವೃದ್ಧಿಯ  ದೃಷ್ಟಿಯಿಂದ ಬಹಳ ಮುಖ್ಯ. ಆರ್ಥಿಕ ಶಿಸ್ತು ತಂದು ರಾಜ್ಯದ ಹಿತದೃಷ್ಟಿಯನ್ನು ನಮ್ಮ ಗಮನದಲ್ಲಿಟ್ಟುಕೊಂಡಿದ್ದೇವೆ ಎಂದರು.

ಶಿಗ್ಗಾಂವ ಮತ್ತು ಸವಣೂರು ಕ್ಷೇತ್ರದ ಅಭಿವೃದ್ಧಿಗೆ ಪಣ

ರಾಜ್ಯದಲ್ಲಿ ಒಂದು ಮಾದರಿ ಕ್ಷೇತ್ರವನ್ನಾಗಿ ಶಿಗ್ಗಾಂವ ಮತ್ತು ಸವಣೂರು ಮಾಡಲು ನಾನು ಪಣ ತೊಟ್ಟಿದ್ದು, ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ  ಶಿಕ್ಷಣ, ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಾನು ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಿದ್ದೇನೆ ಎಂದರು.

ಕಿತ್ತೂರು ಕರ್ನಾಟಕ ಭಾಗಕ್ಕೆ‌ ಅಮಿತ ಶಾ ನೀಡಿರು ಭೇಟಿಯಿಂದ ಅಲೆ ಹೆಚ್ಚಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಅಲೆ ಸುನಾಮಿಯಾಗಿ, ನಾವು ಕಳೆದ ಭಾರಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Similar News