ವಿಷ್ಣುವರ್ಧನ್ ರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಮುಂದಿನ ದಿನಗಳಲ್ಲಿ ಕ್ರಮ: ಸಿಎಂ ಬೊಮ್ಮಾಯಿ

Update: 2023-01-29 09:19 GMT

ಮೈಸೂರು, ಜ.29: ಖ್ಯಾತ ಚಲನಚಿತ್ರ ನಟ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಮುಂದಿನ ದಿನಗಳಲ್ಲಿ ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ

ಮೈಸೂರು ನಗರದ ಎಚ್.ಡಿ.ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ  ಡಾ.ವಿಷ್ಣುವರ್ಧನ್ ಪ್ರತಿಷ್ಠಾನ (ರಿ), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿತ ವಿಷ್ಣುವರ್ಧನ್ ಸ್ಮಾರಕವನ್ನು ರವಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.

ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂಬ ನಿಮ್ಮ ಬಾವನೆ ನನಗೆ ಅರ್ಥವಾಗಿದೆ. ನಿಮ್ಮ ಭಾವನೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

 ನಾನು ವಿಷ್ಣುವರ್ಧನ್ ಅಭಿಮಾನಿಯಾಗಿ ಇಲ್ಲಿಗೆ ಬಂದಿದ್ದೇನೆ. 80ರ ದಶಕದಲ್ಲಿ ನಾಗರಹಾವು ಚಲನಚಿತ್ರದ ಪೋಸ್ಟರ್ ಪ್ರಜಾಮತ ಪತ್ರಿಕೆಯಲ್ಲಿ ನೋಡಿ ಸಂತೋಷಪಟ್ಟಿದ್ದೆವು. ನಂತರ ವಿಷ್ಣುವರ್ಧನ್  ನಾಗರಹಾವು ಚಿತ್ರ ಬಿಡುಗಡೆ ಆಯಿತು. ಈ ಚಿತ್ರ ನೋಡಿದ ಎಲ್ಲರೂ ಅವರ ಅಭಿಮಾನಿಗಳಾಗಿದ್ದಾರೆ ಎಂದು ಬಣ್ಣಿಸಿದರು.

ವಿಷ್ಣುವರ್ಧನ್ ಪೌರಾಣಿಕ ಪಾತ್ರ ಸಾಮಾಜಿಕ ಪಾತ್ರ ಸೇರಿದಂತೆ ಹಲವು ಚಿತ್ರಗಳನ್ನು ಮಾಡಿ ಯಾವುದೇ ಪಾತ್ರ ಕೊಟ್ಟರು ಅದಕ್ಕೆ ನೈಜತೆ ತುಂಬಿ ನಟಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಿದ್ದರು.

ಅವತ್ತಿನ ಮೇರು ನಟಿ ಭಾರತಿ ಅಮ್ಮನವರು ಅವರ ಬಾಳಸಂಗಾತಿಯಾದ ಮೇಲೆ ವಿಷ್ಣುವರ್ಧನ್ ದೊಡ್ಡ ಸಾಧನೆ ಮಾಡಿದರು. ‌ಭಾರತಿ ಅವರ ಬೆನ್ನೆಲುಬಾಗಿ ನಿಂತು  ಅವರ ಜೊತೆಗೆ ನಡೆದರು. ಕಡೆ ದಿನಗಳಲ್ಲಿ ವಿಷ್ಣುವರ್ಧನ್ ಆಧ್ಯಾತ್ಮಿಕತೆಗೆ ಒಳಗಾದಲೂ ಅವರು ವಿಷ್ಣುವರ್ಧನ್ ಅವರ ಹಿಂದೆ ನಿಂತುಕೊಂಡರು ಎಂದು ಸ್ಮರಿಸಿದರು.

ವಿಷ್ಣುವರ್ಧನ್ ಅವರಿಗೆ ಗೌರವ ತರುವ ರೀತಿ ಸ್ಮಾರಕ ಆಗಿದೆ.‌ ಇಲ್ಲಿ ಆರ್ಟ್ ಗ್ಯಾಲರಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಇದನ್ನು ಪ್ರವಾಸಿ ತಾಣವಾಗಿ ಮಾಡಿ, ಇಲ್ಲಿ ಸಿನೆಮಾ ನಿರ್ಮಾಣದ ಕೇಂದ್ರ ಆಗಬೇಕು ಅದಕ್ಕೆ ನಮ್ಮ ಸರ್ಕಾರ ಸಹಕಾರ ನೀಡಲಿದೆ ಎಂದು ಹೇಳಿದರು.

ಭಾರತಿ ಅಮ್ಮನವರು ಫಿಲಿಂ ಇನ್ ಸ್ಟಿಟ್ಯೂಟ್ ಆಗಬೇಕೆಂದು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನೂ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಟಿ ಡಾ.ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್, ಶಾಸಕರುಗಳಾದ  ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Similar News