ರಾಯಚೂರು ಅಥವಾ ಸಿಂಧನೂರಿಂದ ಸ್ಪರ್ಧಿಸಿದರೆ ಜಮೀನು ಮಾರಿ ಹಣ ನೀಡುತ್ತೇನೆ; ಸಿದ್ದರಾಮಯ್ಯಗೆ ಅಭಿಮಾನಿಯಿಂದ ಆಹ್ವಾನ

Update: 2023-01-31 05:46 GMT

ರಾಯಚೂರು: ರಾಯಚೂರು ನಗರ ಅಥವಾ ಸಿಂಧನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿಕ್ಕ ಹೆಸರೂರು ಗ್ರಾಮದ ಅಭಿಮಾನಿ ಶರಣು ಕಡ್ಡೋಣಿ ಎಂಬುವವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆಫರ್ ಒಂದನ್ನ ನೀಡಿದ್ದಾರೆ.

ಯಾದಗಿರಿ ಕ್ಷೇತ್ರದಿಂದ ಸ್ಫರ್ಧೆ ಮಾಡಿದರೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಮಾಜಿ ತಾ.ಪಂ ಸದಸ್ಯ, ಬಿಜೆಪಿ ಮುಖಂಡ ಚಂದ್ರಯ್ಯಾ ನಾಗರಾಳ ಎಂಬುವರು ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ​ ಆಫರ್​ ನೀಡಿದ್ದರು. ಇದೀಗ ಫೇಸ್‌ಬುಕ್‌ ನಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಶರಣು ಕಡ್ಡೋಣಿ ಎಂಬವರು ರಾಯಚೂರು ಜಿಲ್ಲೆಯಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದು, ಸ್ಪರ್ಧೆ ಮಾಡಿದರೆ ಚುನಾವಣೆ  ಖರ್ಚಿಗೆ ಎರಡು ಎಕರೆ ಜಮೀನು ಮಾರಿ ಹಣ ಕೊಡುವ ಭರವಸೆ ನೀಡಿದ್ದಾರೆ.  

'ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಸಿದ್ದರಾಮಯ್ಯ ಬರಬೇಕು, ನಾನು ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಯುವಕ. ಈ‌ ಲಿಂಗಸಗೂರು ಕ್ಷೇತ್ರ ಎಸ್ ಸಿ ಮೀಸಲಾತಿ ಕ್ಷೇತ್ರವಾಗಿದೆ.  ಸಿಂಧನೂರು ಅಥವಾ ರಾಯಚೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲಿ, 50 ಸಾವಿರ ಮತಗಳ ಅಂತರದಿಂದ ಸಿದ್ದರಾಮಯ್ಯಗೆ ಗೆಲ್ಲಲಿದ್ದಾರೆ'ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಯಾದಗಿರಿಯಲ್ಲಿ ಸ್ಪರ್ಧಿಸಿದರೆ 1 ಕೋಟಿ ರೂ. ನೀಡುವೆ ಎಂದ BJP ಮುಖಂಡ

Similar News