ಪ್ರಪಂಚದ ಸಮಸ್ಯೆಗಳಿಗೆ ಭಾರತ ಇಂದು ಪರಿಹಾರ ಒದಗಿಸುತ್ತಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

Update: 2023-01-31 06:39 GMT

ಹೊಸದಿಲ್ಲಿ: "ಇಂದು ಭಾರತ "ನಿರ್ಭೀತ, ನಿರ್ಣಾಯಕ ಸರಕಾರವನ್ನು ಹೊಂದಿದೆ. ಅದು ದೊಡ್ಡ ಕನಸುಗಳನ್ನು ಈಡೇರಿಸಲು ಕೆಲಸ ಮಾಡುತ್ತಿದೆ.ಇಂದು ಭಾರತವು ಪ್ರಾಮಾಣಿಕರನ್ನು ಗೌರವಿಸುವ ಹಾಗೂ  ಬಡವರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ  ಅವರನ್ನು ಶಾಶ್ವತವಾಗಿ ಸಬಲೀಕರಣಗೊಳಿಸಲು ಕೆಲಸ ಮಾಡುವ ಸರಕಾರವನ್ನು ಹೊಂದಿದೆ. ಇಂದು ಭಾರತವು ಪ್ರಪಂಚದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದೆ''  ಎಂದು ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ  ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು(President Draupadi Murmu) ಹೇಳಿದರು.

"ಸರಕಾರವು ಶೀಘ್ರದಲ್ಲೇ ಒಂಬತ್ತು ವರ್ಷಗಳನ್ನು ಪೂರ್ಣಗೊಳಿಸುತ್ತದೆ. ಇಂದಿನ ದೊಡ್ಡ ಬದಲಾವಣೆ ಎಂದರೆ ಪ್ರತಿಯೊಬ್ಬ ಭಾರತೀಯನು ತನ್ನ ಆತ್ಮವಿಶ್ವಾಸದ ಉತ್ತುಂಗದಲ್ಲಿದ್ದಾನೆ" ಎಂದು ರಾಷ್ಟ್ರಪತಿ  ಮುರ್ಮು ತನ್ನ ಚೊಚ್ಚಲ ಭಾಷಣದಲ್ಲಿ ಹೇಳಿದರು.

ಕೇಂದ್ರ ಬಜೆಟ್‌ಗೆ ಮುನ್ನಾದಿನ  ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಬಜೆಟ್ ಅಧಿವೇಶನದ ಮೊದಲ ಭಾಗವು ಫೆಬ್ರವರಿ 13 ರಂದು ಮುಕ್ತಾಯಗೊಳ್ಳಲಿದ್ದು, ಎರಡನೇ ಭಾಗವು ಮಾರ್ಚ್ 13 ರಿಂದ ಏಪ್ರಿಲ್ 6 ರವರೆಗೆ ನಡೆಯಲಿದೆ.

"ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಶ್ರೀನಗರದಿಂದ ವಿಮಾನಗಳು ವಿಳಂಬವಾಗಿರುವ ಕಾರಣ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ಸಂಸದರು ರಾಷ್ಟ್ರಪತಿ ಭಾಷಣಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ'' ಎಂದು ಪಕ್ಷದ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ಸೋಮವಾರ ಭಾರತ್ ಜೋಡೋ ಯಾತ್ರೆಯ ಸಮಾರೋಪ ಕಾರ್ಯಕ್ರಮಗಳಿಗಾಗಿ ಕಾಂಗ್ರೆಸ್ ನಾಯಕರು ಹಾಗೂ  ಸಂಸದರು ಶ್ರೀನಗರಕ್ಕೆ ತೆರಳಿದ್ದರು.