ಬಿಜೆಪಿ ಕಿಸಾನ್ ಮೋರ್ಚಾ ಕಾರ್ಯಕಾರಿಣಿಯಲ್ಲಿ ಕನ್ನಡ ಮಾಯ: ಜೆಡಿಎಸ್‌ ಆಕ್ಷೇಪ

Update: 2023-01-31 11:46 GMT

ಬೆಂಗಳೂರು: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಬಿಜೆಪಿ ಕಿಸಾನ್ ಮೋರ್ಚಾ ಕಾರ್ಯಕಾರಣಿ ಸಭೆಯ ವೇದಿಕೆಯಲ್ಲಿ ದುರ್ಬೀನು ಹಾಕಿ ಹುಡುಕಿದರೂ ಕನ್ನಡ ಸಿಗದಿರುವುದು ನಾಚಿಕೆಗೇಡಿನ‌ ಸಂಗತಿ. ನಮ್ಮ ರಾಜ್ಯದ ಭಾಗದಲ್ಲಿ ನಡೆಯುವ ಸಭೆಯಲ್ಲಿ ಒಂದು ಸಾಲು ಕನ್ನಡ ಬಳಸದೆ ಒಕ್ಕೂಟ ವ್ಯವಸ್ಥೆಯ ಗೌರವವನ್ನು ಗಾಳಿಗೆ ತೂರಿರುವುದು ಖಂಡನಾರ್ಹ ಎಂದು ಜೆಡಿಎಸ್  @JanataDal_S ಆಕ್ಷೇಪ ವ್ಯಕ್ತಪಡಿಸಿದೆ.  

ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಜೆಡಿಎಸ್‌,  'ದೆಹಲಿಯ ಹೈಕಮಾಂಡ್ ನ ಓಲೈಸಲು ಇಂತಹ ಆತ್ಮಗೌರವವಿಲ್ಲದ ನಡೆಯನ್ನು ಇನ್ನೂ ಎಷ್ಟು ದಿನ ಮುಂದುವರಿಸುತ್ತೀರಿ, ಸಿಟಿ ರವಿ ಅವರೆ? ಕನ್ನಡ ಭಾಷೆ, ಕನ್ನಡ ಜಲ, ಕನ್ನಡಿಗರ ಬದುಕು, ಕರುನಾಡ ಏಳ್ಗೆ ಎಲ್ಲದರ ಬಗ್ಗೆಯೂ ಇಷ್ಟು ತಾತ್ಸಾರದ ನಡೆ ದುರಭಿಮಾನದಿಂದ ಕೂಡಿದೆ. ಹೈಕಮಾಂಡ್ ಗುಲಾಮಿ ಪಕ್ಷ ಎನ್ನಲು‌ ಇದಕ್ಕಿಂತ ಹೆಚ್ಚೇನು ಬೇಕು?' ಎಂದು ಕಿಡಿಕಾರಿದೆ. 

"ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು" ಎಂದ ಕುವೆಂಪು ಅವರ ನಾಡಿನ ನಮಗೆ ಕಿಂಚಿತ್ತಾದರೂ ಸ್ವಾಭಿಮಾನ ಇರಬೇಕು. ನಿಮ್ಮ ಕನ್ನಡ ವಿರೋಧಿ ನಡೆಗೆ ಜನತೆ ಸೂಕ್ತ ಉತ್ತರ ನೀಡುತ್ತಾರೆ. ರಾಜಕೀಯ ಲಾಭ-ನಷ್ಟದ ಕಾರಣಕ್ಕೆ ನಮ್ಮ ಸ್ವಾಭಿಮಾನವನ್ನು ಅಡ ಇಡುವ ಕೆಲಸ ಘನತೆ ತರುವಂತದಲ್ಲ ಎಂದು ಜೆಡಿಎಸ್ 
@JanataDal_S ಹೇಳಿದೆ. 
 

Similar News