ಕಳೆದ 2-3 ವರ್ಷಗಳಲ್ಲಿ ತುಮಕೂರು ಜಿಲ್ಲೆಯಲ್ಲಿ 5 ಜನ ದಲಿತ ಯುವಕರ ಕೊಲೆ: ದಲಿತಸೇನೆ ಆರೋಪ

''ಜಿಲ್ಲೆಯಲ್ಲಿ ಇಂದಿಗೂ ಅಸ್ಪೃಶ್ಯತೆ ಜಾರಿಯಲ್ಲಿದೆ''

Update: 2023-01-31 11:06 GMT

ತುಮಕೂರು.ಜ.31: 'ಜಾತಿ, ಭೇದವಿಲ್ಲದ ಸಾವಿರಾರು ಮಕ್ಕಳಿಗೆ ಊಟ, ವಸತಿ, ಜ್ಞಾನ ನೀಡಿದ ತ್ರಿವಿಧ ದಾಸೋಹಿ ಡಾ.ಶ್ರೀಶಿವ ಕುಮಾರಸ್ವಾಮೀಜಿ ಅವರು ಬದುಕಿದ್ದಂತಹ ತುಮಕೂರು ಜಿಲ್ಲೆಯಲ್ಲಿ ಇಂದಿಗೂ ದಲಿತರಿಗೆ ಸಾಮಾಜಿಕ ಬಹಿಷ್ಕಾರ, ದೇವಾಲಯ ಪ್ರವೇಶ ನಿರಾಕರಣೆಯಂತಹ ಅಸ್ಪೃಶ್ಯತೆ ಆಚರಣೆಯಲ್ಲಿರುವುದು ದುರಂತದ ಸಂಗತಿಯಾಗಿದೆ' ಎಂದು ದಲಿತಸೇನೆ ಹಾಗೂ ಲೋಕಜನಶಕ್ತಿ ಪಕ್ಷದ ರಾಜ್ಯಾಧ್ಯಕ್ಷ ಎಂ.ಎಸ್.ಜಗನ್ನಾಥ್(ಜಗ್ಗು) ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 'ಕಳೆದ 2-3 ವರ್ಷಗಳಲ್ಲಿ ಜಿಲ್ಲೆಯಲ್ಲಿ 5 ಜನ ದಲಿತ ಯುವಕರ ಕೊಲೆಯಾಗಿದೆ. ಪೆದ್ದನಹಳ್ಳಿಯ ಇಬ್ಬರು ಯುವಕರ ಕೊಲೆ, ಗುಬ್ಬಿಯ ಅಭಿಷೇಕ ಮತ್ತು ಕುರಿ ಮೂರ್ತಿ ಸೇರಿದಂತೆ ಹಲವರ ಕೊಲೆಯಾಗಿದೆ. ಇದುವರೆಗೂ ಆ ಕುಟುಂಬಗಳಿಗೆ ನ್ಯಾಯ ದೊರೆಕಿಲ್ಲ. ಗುಬ್ಬಿ ತಾಲೂಕು ಆರಿಯೂರು ಶ್ರೀವೈದ್ಯನಾಥೇಶ್ವರ ದೇವಾಲಯದ ಉತ್ಸವ ಮೂರ್ತಿಯನ್ನು ದಲಿತರ ಕೇರಿಗೆ ಮೆರವಣಿಗೆ ತರುವ ವಿಚಾರದಲ್ಲಿ ಗಲಾಟೆ ನಡೆದಿದೆ. ಜಿಲ್ಲೆಯಲ್ಲಿ ಅಸ್ಪೃಶ್ಯತೆ ಚಾಲ್ತಿಯಲ್ಲಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಮತ್ತೊಂದು ಬೇಕೇ' ಎಂದು ಪ್ರಶ್ನಿಸಿದರು.

ದಿವಂಗತ ರಾಮವಿಲಾಸ್ ಪಸ್ವಾನ್ ಅವರ ದಲಿತಸೇನೆ ಮತ್ತು ಲೋಕಜನಶಕ್ತಿ ಪಾರ್ಟಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಈ ಬಾರಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ.ಈಗಾಗಲೇ ಪಕ್ಷದ ಟಿಕೇಟ್ ಬಯಸಿ ಹಲವಾರು ಜನರು ಅರ್ಜಿ ಸಲ್ಲಿಸುತ್ತಿದ್ದು, ಫೆಬ್ರವರಿಯಲ್ಲಿ ಬೆಂಗಳೂರಿಗೆ ಚಿರಾಗ್ ಪಾಸ್ವಾನ್ ಅವರು ಭೇಟಿ ನೀಡುತಿದ್ದು,ಈ ವೇಳೆ ಪಕ್ಷ ಆಕಾಂಕ್ಷಿಗಳ ಬಗ್ಗೆ ಚರ್ಚಿಸಿ,ಅಂತಿಮ ಪಟ್ಟಿ ಸಿದ್ಧಪಡಿಸಲಾಗುವುದು. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರ ಸವಲತ್ತು ದೊರೆಯಬೇಕು ಎಂಬ ನಿಲುವು ಲೋಕ ಜನಶಕ್ತಿ ಪಕ್ಷದ್ದಾಗಿದೆ.ದೇಶದ ಎಲ್ಲಾ ವರ್ಗದ ಬಡವರಿಗೆ ಅರ್ಥಿಕ ಸವಲತ್ತು ದೊರೆತು,ಅವರು ಅರ್ಥಿಕವಾಗಿ ಬೆಳೆಯಬೇಕೆಂಬ ಒಳ್ಳೆಯ ಉದ್ದೇಶವನ್ನು ಪಕ್ಷ ಹೊಂದಿದೆ. ಇದನ್ನೇ ಮುಂದಿಟ್ಟುಕೊಂಡು 2023ರ ಚುನಾವಣೆ ಎದುರಿಸಲಿದ್ದೇವೆ ಎಂದು ಎಂ.ಎಸ್.ಜಗನ್ನಾಥ್ ತಿಳಿಸಿದರು.

ಸರಕಾರಗಳು ಬಡಜನರ ಅಭಿವೃದ್ಧಿಗೆ ನೀಡುತ್ತಿರುವ ಅನುದಾನ ಶಾಸಕರು ಮತ್ತು ಅವರ ಹಿಂಬಾಲಕರ ಕೈ ಸೇರಿ, ಬಡವ-ಶ್ರೀಮಂತರ ನಡುವಿನ ಕಂದಕ ಮತ್ತಷ್ಟು ಹೆಚ್ಚಾಗಿದೆ.ಇದನ್ನು ಆದಷ್ಟು ಕಡಿಮೆ ಮಾಡುವ ಉದ್ದೇಶವನ್ನು ಲೋಕಜನಶಕ್ತಿ ಪಾರ್ಟಿ ಹೊಂದಿದೆ.ಈ ಹಿಂದಿನ ರೀತಿ ಇದುವರೆಗೂ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ.2023ರ ಚುನಾವಣೆಯಲ್ಲಿ ಪ್ರಭಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸೇನೆ ಹಾಗೂ ಲೋಕಜನಶಕ್ತಿ ಪಕ್ಷದ ರಾಜ್ಯ ಉಪಾಧ್ಯಕ್ಷ ವೆಂಕಟೇಶ್,ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಚನ್ನಮ್ಮ,ಜಿಲ್ಲಾಧ್ಯಕ್ಷ ಗೂಳೂರು ಸಿದ್ದರಾಜು,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಸೌಭಾಗ್ಯ,ಮುಖಂಡರಾದ ಮನು, ಶಾಂತ, ರಾಘವೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.

Similar News