ವಿರಾಜಪೇಟೆ: ಕಾರಿನ ಮೇಲೆ ಕಾಡಾನೆ ದಾಳಿ

Update: 2023-01-31 13:44 GMT

ಮಡಿಕೇರಿ ಜ.31 : ಮನೆಯ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿ ಹಾನಿಗೊಳಿಸಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಕೆದಮಳ್ಳೂರು ಗ್ರಾಮದಲ್ಲಿ ನಡೆದಿದೆ.

ಮುಂಜಾನೆ ವೇಳೆ ದಟ್ಟ ಮಂಜಿನ ವಾತಾವರಣದಲ್ಲಿ ಕಾಡಾನೆ ದಾಳಿ ಮಾಡಿದ್ದು, ಕಾರು ಜಖಂಗೊಂಡಿದೆ. ಗ್ರಾಮದ ನಿವಾಸಿ ಶ್ರೀಧರ ಅವರ ಪುತ್ರ ಕುಶ ಎಂಬುವವರಿಗೆ ಸೇರಿದ ಕಾರು ಇದಾಗಿದೆ. 

ಕಳೆದ ಹಲವು ತಿಂಗಳುಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಕಾಫಿ ತೋಟ ಸೇರಿದಂತೆ ಕೃಷಿ ಭೂಮಿಗಳನ್ನು ಧ್ವಂಸ ಮಾಡಿದೆ. ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಲು ಅರಣ್ಯ ಇಲಾಖೆ ಅರಣ್ಯದಂಚಿನಲ್ಲಿ ಬೃಹತ್ ಕಂದಕ ನಿರ್ಮಾಣ ಮಾಡುತ್ತಿದೆ. ಅರಣ್ಯದಿಂದ ಗ್ರಾಮಕ್ಕೆ ಬಂದಿರುವ ಕಾಡಾನೆಗಳನ್ನು ಕಾಡಿಗಟ್ಟದೆ ಕಂದಕ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕ ಕ್ರಮ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಗ್ರಾಮದಲ್ಲಿ ಆತಂಕದ ವಾತಾವರಣ ಮುಂದುವರಿದಿದ್ದು, ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.  

Similar News