ಬೆಂಗಳೂರಿನಲ್ಲಿ ಕೊಲೆಯಾದ ಯುವಕನ ಮೃತದೇಹ ಚಾರ್ಮಾಡಿ ಘಾಟ್ ನ ಪ್ರಪಾತದಲ್ಲಿ ಪತ್ತೆ

ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಅಪಹರಿಸಿ ಕೊಲೆ: ದೂರು

Update: 2023-02-01 07:30 GMT

ಚಿಕ್ಕಮಗಳೂರು, ಫೆ.1: ಯುವತಿಯೊಬ್ಬಳಿಗೆ ಮೆಸೇಜ್ ಮಾಡಿದನೆಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಯುವಕನೋರ್ವನನ್ನು ಅಪಹರಿಸಿ ಕೊಲೆಗೈದು (Murder) ಚಾರ್ಮಾಡಿ ಘಾಟ್ ನಲ್ಲಿ ಎಸೆದಿರುವ ಪ್ರಕರಣವನ್ನು ಭೇದಿಸಿರುವ ಯಶವಂತಪುರ ಠಾಣೆ ಪೊಲೀಸರು ಮೃತದೇಹವನ್ನು ಪ್ರಪಾತದಲ್ಲಿ ಪತ್ತೆ ಹಚ್ಚಿದ್ದಾರೆ.

ಬೆಂಗಳೂರಿನ ಆಂಧ್ರಹಳ್ಳಿ ನಿವಾಸಿ ಗೋವಿಂದರಾಜು(19) ಕೊಲೆಯಾದ ಯುವಕ.

ಗೋವಿಂದರಾಜು ತನ್ನದೇ ಕುಟುಂಬದ ಮತ್ತಿಕೆರೆಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನೆನ್ನಲಾಗಿದೆ. ಪ್ರೀತಿಗೆ ಯುವತಿಯ ಪೋಷಕರು, ಸಂಬಂಧಿಕರಿಂದ ವಿರೋಧವಿತ್ತೆನ್ನಲಾಗಿದೆ. ಇತ್ತೀಚೆಗೆ ಗೋವಿಂದರಾಜು ಯುವತಿಯ ಮೊಬೈಲ್ ಫೋನ್ ಗೆ ಮೆಸೇಜೊಂದನನ್ನು ಕಳುಹಿಸಿದ್ದರೆನ್ನಲಾಗಿದೆ. ಇದನ್ನು ಗಮನಿಸಿದ ಯುವತಿಯ ಸಂಬಂಧಿಕ ಅನಿಲ್ ಕುಮಾರ್, ಭರತ್ ಎಂಬವರು ಇನ್ನಿಬ್ಬರೊಂದಿಗೆ ಸೇರಿ ಗೋವಿಂದರಾಜುನನ್ನು‌ ಮತ್ತಿಕೆರೆಯಲ್ಲಿ ಕಾರಿನಲ್ಲಿ ಅಪಹರಿಸಿದ್ದಾರೆ. ನಂತರ ಬೆಂಗಳೂರಿನ ರಾಜ್ ಗೋಪಾಲ್ ನಗರದ ಅಂಧರಹಳ್ಳಿ ಎಂಬಲ್ಲಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಚಾರ್ಮಾಡಿ ಘಾಟ್ ಗೆ ತಂದು ಪ್ರಪಾತಕ್ಕೆ ಎಸೆದಿದ್ದಾರೆ  ಎಂದು ಪೊಲೀಸರು ತಿಳಿಸಿದ್ದಾರೆ.

 ಯುವತಿಗೆ ಮೆಸೇಜ್ ಮಾಡಿದ್ದಕ್ಕಾಗಿ ತನ್ನ ಮಗ ಗೋವಿಂದರಾಜುವನ್ನು ಯುವತಿಯ ಸೋದರ ಮಾವ ಅನಿಲ್ ಕುಮಾರ್ ಎಂಬಾತ ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಗೋವಿಂದರಾಜು ತಂದೆ ರಘು ಅವರು ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅನಿಲ್ ಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದೆ. ಅನಿಲ್ ಕುಮಾರ್, ಭರತ್ ಸೇರಿದಂತೆ ಬಂಧಿತ ನಾಲ್ವರು ಆರೋಪಿಗಳನ್ನು ಯಶವಂತಪುರ ಪೊಲೀಸರು ಇಂದು ಚಾರ್ಮಾಡಿ ಘಾಟ್ ಗೆ ಕರೆತಂದು ಸ್ಥಳೀಯ ಸಮಾಜ ಸೇವಕರೊಂದಿಗೆ ಶೋಧ ನಡೆಸಿದ್ದಾರೆ. ಈ ವೇಳೆ ಪ್ರಪಾತದಲ್ಲಿ ಗೋವಿಂದರಾಜು ಮೃತದೇಹ ಪತ್ತೆಯಾಗಿದೆ.

Similar News