ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ: ಸಿಎಂ ಬೊಮ್ಮಾಯಿ ಭರವಸೆ

Update: 2023-02-01 18:03 GMT

ವಿಜಯಪುರ, (ತಂಗಡಗಿ) ಫೆ.1 : ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. ವೃತ್ತಿ ಆಧಾರಿತವಾದ ಕುಲಕಸುಬುಗಳ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸಿ, ನಿಮಗದ ಮುಖಾಂತರ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಮಾಜದ ಕುಲಶಾಸ್ತ್ರ ಅಧ್ಯಯನ ಮಾಡಿ ಸಮಾಜಕ್ಕೆ ನ್ಯಾಯ ದೊರಕಿಸಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಮಾಜದ ನಿಗಮದಲ್ಲಿ ಹಡಪದ ಸಮುದಾಯ ಒಳಗೊಂಡಿಲ್ಲ.  ಶಿವಶರಣ ಹಡಪದ ಅಪ್ಪಣ್ಣ ಅವರ ಜನ್ಮಸ್ಥಳ ಮಸಬಿನಾಳ, ಹಡಪದ ಅಪ್ಪಣ್ಣನವರ ಶರಣ ಲಿಂಗಮ್ಮ ತಾಯಿಯವರ ಜನ್ಮಸ್ಥಳ ದೇಗಿನಾಳ ಗ್ರಾಮವನ್ನು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸುವ ತಮ್ಮ ಬೇಡಿಕೆಯನ್ನು ಪರಿಶೀಲಿಸಲಾಗುವುದು. ಶ್ರೀ ಕ್ಷೇತ್ರದ ಅಭಿವೃದ್ದಿಗೆ  1 ಕೋಟಿ ರೂ. ನೀಡಲಾಗಿತ್ತು. ನನ್ನ ಅವಧಿಯಲ್ಲಿ 3 ಕೋಟಿ ರೂ.ಗಳನ್ನು ಅನುದಾನ ನೀಡಲಾಗಿದ್ದು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡಿಗಲ್ಲು ಹಾಕಲಾಗಿದೆ ಎಂದರು.

'ಕುಲಕಸುಬುಗಳಿಗೆ ಮನ್ನಣೆ :'

ಶೈಕ್ಷಣಿಕವಾಗಿ ಶಾಲೆ, ವಿದ್ಯಾರ್ಥಿನಿಲಯ ಸ್ಥಾಪಿಸಬೇಕೆಂಬ ಇಚ್ಛೆ ಯಿದ್ದು, ಈಗಾಗಲೇ ಒದಗಿಸಿರುವ ಮೂರು ಕೋಟಿ ರೂ.ಗಳನ್ನು ಖರ್ಚು ಮಾಡಿದರೆ, ಹೆಚ್ಚುವರಿಯಾಗಿ ಅಗತ್ಯವಿರುವ ಮೊತ್ತವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಕಾಯಕ ಯೋಜನೆಯಡಿ  ಅನುದಾನ ನೀಡಲಾಗುತ್ತಿದೆ. ಅವರ ಕುಲಕಸುಬುಗಳನ್ನು ಉನ್ನತೀಕರಿಸುವ ಯೋಜನೆ ಇದಾಗಿದೆ. ಪ್ರಥಮ ಬಾರಿಗೆ ಅವರ ಕುಲಕಸುಬುಗಳ ಬಗ್ಗೆ ಮನ್ನಣೆ ನೀಡಿ, ಚಿಂತಿಸಿರುವುದು ನಮ್ಮ ಸರ್ಕಾರ ಎಂದರು. ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಡಪದ ಸಮಾಜದವರು ಸಂಘಟಿತರಾಗಬೇಕು :

ಹಡಪದ ಸಮಾಜ ಹಿಂದೆ ಸಂಘಟನೆಯಾಗಿರಲಿಲ್ಲ. ಆದರೆ ನಾನು ಮುಖ್ಯಮಂತ್ರಿಯಾದಾಗಲೇ ಈ ಸಮುದಾಯ ಸಂಘಟಿತವಾಗಿರುವುದು ದೈವೇಚ್ಛೆ. 2016ರ ಪೂರ್ವದಲ್ಲಿ ಈ ಸಮುದಾಯ ‘ನಾಯಿಂದ’ ಸಮಾಜದಿಂದ ವಿಂಗಡಿಸಿದ್ದರು. ಆ ಸಂದರ್ಭದಲ್ಲಿಯೇ ನೀವು ಸಂಘಟನೆಯಾಗಬೇಕಿತ್ತು. ಸಾಮಾಜಿಕ ಹಿತಾಸಕ್ತಿಯಿಂದ ಹಡಪದ ಸಮಾಜದವರು ಸಂಘಟಿತರಾಗಲು ಅವಕಾಶ ನೀಡಲಿಲ್ಲ. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ಸಣ್ಣ ಸಣ್ಣ ಸಮುದಾಯಗಳಿಗೆ ಧ್ವನಿ ಸಿಕ್ಕಿದೆ. ಸಮಾಜದಲ್ಲಿ  ಬದಲಾವಣೆ ತರಬೇಕಾದ ಪರವಿರೋಧಗಳು ಬರುವುದು ಸಹಜ. ಈ ವಿರೋಧಗಳನ್ನು ಮೆಟ್ಟಿನಿಂತಾಗ ಮಾತ್ರ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ ಎಂದರು.

ಹಡಪದ ಸಮಾಜದ ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ :

12ನೇ ಶತಮಾನದಲ್ಲಿ ಹಡಪದ ಅಪ್ಪಣ್ಣನವರು ಬಸವಣ್ಣನವರಿಗೆ ಅತ್ಯಂತ ಆತ್ಮೀಯರಾಗಿದ್ದರು. ಶ್ರೀಗುರುಗಳು ಮೇಧಾವಿಗಳು , ಕಾಯಕನಿಷ್ಠರು.ಅವರ ವಚನಗಳು ಇಂದಿಗೂ ನಮಗೆ ಮಾರ್ಗದರ್ಶನ ನೀಡುತ್ತವೆ ಹಡಪದ ಅಪ್ಪಣ್ಣರು ಅತ್ಯಂತ ಮುಗ್ಧ ಗುರುಗಳು.ಅವರ ಮುಗ್ಧತೆಯಲ್ಲಿಯೇ ಅವರ ಪ್ರೀತಿ ವಿಶ್ವಾಸವಿದೆ. ತಮ್ಮ ಸಮಾಜದ ಬಗ್ಗೆ ಅತೀವವಾದ ಕಳಕಳಿಯಿದೆ. ಸಮಾಜದ ಒಳಿತಿಗೆ ನಿರಂತರವಾಗಿ ಶ್ರಮಿಸುತ್ತಿರುವವರ ಶ್ರೀಗುರುಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಸಮಾಜದ ಜನರ ಸ್ಥಿತಿಗತಿ ಬಗ್ಗೆ ನನಗೆ ಅರಿವಿದೆ. ಹಡಪದ ಸಮಾಜದ ಆಶೋತ್ತರಗಳನ್ನು ಈಡೇರಿಸುವುದು ನಮ್ಮೆರ ಕರ್ತವ್ಯವಾಗಿದೆ ಎಂದರು.

ಹಡಪದ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳು :

ವಿಜಯನಗರದ ಕೊನೆಯ  ರಕ್ಕಸತಂಗಡಿ ಯುದ್ಧದ ಬಗ್ಗೆ ಓದಿ ತಿಳಿದುಕೊಂಡಿದ್ದೇನೆ. ತಂಗಡಗಿ, ರಕ್ಕಸತಂಗಡಗಿ, ತಾಳಿಕೋಟೆ ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸಿ ಅಭಿವೃದ್ಧಿ ಮಾಡುತ್ತೇವೆ. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಈ ಬಾರಿಯ ಬಜೆಟ್ ನಲ್ಲಿ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು. ಹಡಪದ ಸಮುದಾಯಕ್ಕೆ ಸೌಲಭ್ಯಗಳನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದರು.

Similar News