ಶಾಸಕರ ವಿರುದ್ಧ ಹೇಳಿಕೆ: ಹಿರಿಯ ಮುಖಂಡ ಕೆ.ಸಿ.ಕೊಂಡಯ್ಯಗೆ ನೋಟಿಸ್ ಜಾರಿ ಮಾಡಿದ ಕಾಂಗ್ರೆಸ್

Update: 2023-02-02 12:39 GMT

ಬೆಂಗಳೂರು, ಫೆ. 2: ಹಾಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಸಿ.ಕೊಂಡಯ್ಯ ಅವರಿಗೆ ಕಾಂಗ್ರೆಸ್ ಶಿಸ್ತು ಸಮಿತಿ ಗುರುವಾರ ನೋಟಿಸ್ ನೀಡಿದ್ದು, 10 ದಿನಗಳ ಒಳಗೆ ಕಾರಣ ನೀಡಬೇಕು ಎಂದು ಸೂಚಿಸಿದೆ.

‘ತಾವು ಮಾಧ್ಯಮ ಪ್ರತಿನಿಧಿಗಳೊಂದಿಗೆ ಪಕ್ಷದ ಮಾಜಿ ಸಚಿವರು ಮತ್ತು ಹಾಲಿ ಶಾಸಕರ ಬಗ್ಗೆ ಮಾತಾಡಿರುವುದು ದೃಶ್ಯ ಮಾದ್ಯಮಗಳು ಬಳ್ಳಾರಿಯಲ್ಲಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ ಮತ್ತು ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ರೀತಿಯಲ್ಲಿ ಪ್ರಸಾರವಾಗಿದೆ. ತಮ್ಮಂತಹ ಹಿರಿಯ ನಾಯಕರ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದ್ದು, ತಾವು ಈ ಬಗ್ಗೆ ತಮ್ಮ ವಿವರಣೆಯನ್ನು ನೀಡಬೇಕು ಎಂದು ಎಂದು ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಸಂಚಾಲಕಿ ನಿವೇದಿತಾ ಆಳ್ವ, ಕೊಂಡಯ್ಯರಿಗೆ ನೋಟಿಸ್ ನೀಡಿದ್ದಾರೆ.

ಇತ್ತೀಚೆಗೆ ಹೂವಿನಹಡಗಲಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡುವ ವೇಳೆ  ಕೊಂಡಯ್ಯ, ‘ಶಾಸಕ ಪರಮೇಶ್ವರ ನಾಯ್ಕ್ ಅವರು ಕ್ಷೇತ್ರದ ಅಭಿವೃದ್ಧಿ ಮಾಡುವುದನ್ನು ಬಿಟ್ಟು ತಮ್ಮ ಸ್ವಂತ ಅಭಿವೃದ್ಧಿ ಮಾಡುತ್ತಿದ್ದಾರೆ. ಅವರು ಭ್ರಷ್ಟಾಚಾರ ನಡೆಸಿ ತಮ್ಮ ಆಸ್ತಿ ದುಪ್ಪಟ್ಟು ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಶಿಸ್ತು ಸಮಿತಿ ಕೊಂಡಯ್ಯರಿಗೆ ನೋಟಿಸ್ ಜಾರಿ ಮಾಡಿದೆ.

Similar News