ತೀರ್ಥಹಳ್ಳಿ | 6 ಲಕ್ಷ ರೂ ಮೌಲ್ಯದ ಸೋಲಾರ್ ಪ್ಯಾನಲ್ ಕಳ್ಳತನ ಪ್ರಕರಣ: ಗ್ರಾ.ಪಂ ಕಚೇರಿ ಸಿಬ್ಬಂದಿ ಸೇರಿ ಇಬ್ಬರ ಬಂಧನ

Update: 2023-02-03 04:48 GMT

ಶಿವಮೊಗ್ಗ: ಸುಮಾರು 6 ಲಕ್ಷ ರೂ. ಮೌಲ್ಯದ 36 ಸೋಲಾರ್ ಪ್ಯಾನಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಗ್ರಾ.ಪಂ ಸಿಬ್ಬಂದಿ ಸೇರಿ ಇಬ್ಬರು ಆರೋಪಿಗಳನ್ನ ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ. 

ತೀರ್ಥಹಳ್ಳಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿಧಾನಸಭಾ ಕ್ಷೇತ್ರವಾದ ಉಂಬ್ಳೇಬೈಲು ಗ್ರಾಮ ಪಂಚಾಯತ್​​ ನ ಕಣಗಲಸರ ಗ್ರಾಮದ ಚಿಕ್ಕೆರೆ ಕೆರೆ ಹತ್ತಿರ ಅಳವಡಿಸಲಾಗಿದ್ದ 6 ಲಕ್ಷ ರೂಪಾಯಿ ಮೌಲ್ಯದ ಸೋಲಾರ್ ಪ್ಯಾನೆಲ್ ಪ್ಲೇಟ್ ಗಳು  ಕಳುವಾಗಿದ್ದವು. ಸೋಲಾರ್ ಕಳ್ಳತನ ಕುರಿತು ಗ್ರಾಮ ಪಂಚಾಯತ್ ಪಿಡಿಓ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

2018-19 ನೇ ಸಾಲಿನಲ್ಲಿ ಕಣಗಲಸರ ಗ್ರಾಮದಲ್ಲಿ ಸೋಲಾರ್ ಅಳವಡಿಕೆ ಮಾಡಲಾಗಿತ್ತು. ಸೆಪ್ಟೆಂಬರ್- 8-(2022)ರಂದು ಸೋಲಾರ್ ಪ್ಯಾನೆಲ್ ಪ್ಲೇಟ್ ಗಳ ಕಳ್ಳತನವಾಗಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ತುಂಗಾನಗರ ಪೊಲೀಸರು ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಕಚೇರಿ ಸಿಬ್ಬಂದಿಯೇ ಆರೋಪಿ:  ಸೋಲಾರ್ ಕಳ್ಳತನ ಪ್ರಕರಣದಲ್ಲಿ ಧನು ಎಂಬಾತನನ್ನು ಪೊಲೀಸರು ಮೊದಲು ಬಂಧಿಸಿದ್ದರು. ಆರೋಪಿ ಧನುನನ್ನು ವಿಚಾರಣೆಗೊಳಪಡಿಸಿದಾಗ ಇದೇ ಗ್ರಾ.ಪಂ. ಪಿಡಿಒ ಕಚೇರಿಯಲ್ಲಿ ಡಾಟಾ ‌ಆಪರೇಟರ್ ಆಗಿದ್ದ ಮಧು ಕೂಡ ಪ್ರಕರಕಣದಲ್ಲಿ ಶಾಮೀಲಾಗಿದ್ದಾನೆ ಎಂದು ಪೊಲೀಸರ ತನಿಖೆ ವೇಳೆ ತಿಳಿಸಿದ್ದಾನೆ.

ಧನು ಬಂಧನ ಆಗುತ್ತಿದ್ದಂತೆ ತಲೆ‌ಮರೆಸಿಕೊಂಡಿದ್ದ ಡಾಟಾ ಆಪರೇಟರ್ ಮಧು ಇದೀಗ ತುಂಗಾ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

Similar News