ರಾಮನಗರ | ವಿಷ ಸೇವಿಸಿ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ: ಓರ್ವ ಮಹಿಳೆ ಸಾವು

Update: 2023-02-03 05:45 GMT

ರಾಮನಗರ: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ರಾಮನಗರದ ದೊಡ್ಡ ಮಣ್ಣಗುಡ್ಡೆ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ದೊಡ್ಡ ಮಣ್ಣಗುಡ್ಡೆ ಗ್ರಾಮದ ನಿವಾಸಿ ಮಂಗಳಮ್ಮ(28) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮಂಗಳಮ್ಮನ ತಾಯಿ ಸೊಮ್ಮಪುರದಮ್ಮ(48), ಮಂಗಳಮ್ಮನ ಪತಿ ರಾಜು(31), ಮಕ್ಕಳಾದ ಆಕಾಶ್(9), ಕೃಷ್ಣ(13), ಮಂಗಳಮ್ಮ ತಂಗಿ ಸವಿತಾ(24), ಸವಿತಾ ಪುತ್ರಿ ದರ್ಶಿನಿ (4) ವಿಷಸೇವನೆ ಮಾಡಿದ್ದು, ಇವರನ್ನು ಮಂಡ್ಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲವು ವರ್ಷಗಳಿಂದ ಸಾಲಬಾಧೆಯಿಂದ ಸಂಕಷ್ಟದಲ್ಲಿದ್ದ ಕುಟುಂಬ ಊಟದಲ್ಲಿ ವಿಷ ಸೇವಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದೆ. ಈ ಪೈಕಿ ಮಂಗಳಮ್ಮ ಎಂಬವರು ಮೃತಪಟ್ಟಿದ್ದು, ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳಮ್ಮನವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಮನಗರ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಈ ಸಂಬಂಧ ರಾಮನಗರ ಗ್ರಾಮಾಂತರ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News