ದಾವಣಗೆರೆ: ಬೈಕ್ ಅಪಘಾತ; ಹಂಪಿ ಪೊಲೀಸ್ ಠಾಣೆಯ ಎಎಸ್ಐ ಮೃತ್ಯು

Update: 2023-02-04 17:06 GMT

ಜಗಳೂರು (ದಾವಣಗೆರೆ) : ಇಲ್ಲಿನ ಉಜ್ಜಿನಿ ಸಮೀಪದ ಕಾಳಾಪುರದಲ್ಲಿ ಇತ್ತೀಚೆಗೆ ನಡೆದ ಗಲಾಟೆ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಜಗಳೂರಿಗೆ ಆಗಮಿಸಿದ್ದ ಹೊಸಪೇಟೆಯ ಹಂಪಿ ಪೊಲೀಸ್ ಠಾಣೆಯ ಎಎಸ್‌ಐ ಶಬೀರ್ ಹುಸೇನ್ (59) ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಶನಿವಾರ ವರದಿಯಾಗಿದೆ. 

ಕಾಳಾಪುರದ ಗಲಾಟೆ ಘಟನೆಯ ಆರೋಪಿಗಳನ್ನು ವಿಡಿಯೋ ಆಧರಿಸಿ ಗುರುತು ಪತ್ತೆಹಚ್ಚಲು ಆಗಮಿಸಿದ್ದ ಅವರು ಕಾಳಾಪುರ, ಉಜ್ಜಿನಿ, ಕೊಟ್ಟೂರು, ಜಗಳೂರು ವಿವಿಧ ಹಳ್ಳಿಗಳಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲು ಶನಿವಾರ ಬೆಳಿಗ್ಗೆ ಬಂದಿದ್ದರೆನ್ನಲಾಗಿದೆ. 

ಬೆಳಿಗ್ಗೆ 7 ಗಂಟೆ ಸುಮಾರಿಗೆ ಪಟ್ಟಣದ ಚಿನ್ನು ಡಾಬಾ ಬಳಿ ಕಾರನ್ನು ಓವರ್ ಟೇಕ್ ಮಾಡಿಕೊಂಡು ಎದುರಿಗೆ ಬಂದ ಮತ್ತೊಂದು ಬೈಕ್ ಶಬೀರ್ ಹುಸೇನ್ ಅವರ ಬೈಕ್‍ಗೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ತಲೆಗೆ ಬಲವಾದ ಏಟು ಬಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

ಮೂಲತಃ ಹೊಸಪೇಟೆಯ ಎಸ್‌ಆರ್ ನಗರದ ಛಲವಾದಿ ಕೇರಿಯಲ್ಲಿ ನೆಲೆಸಿದ್ದ ಇವರು ಹಂಪಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮತ್ತೊಂದು ಬೈಕ್‌ನಲ್ಲಿದ್ದ ಸವಾರನಿಗೆ ಗಾಯಗಳಾಗಿದ್ದು,  ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮೃತದೇಹನ್ನು ಜಗಳೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಜಗಳೂರು ಸಿಪಿಐ ಎಂ.ಶ್ರೀನಿವಾಸ್, ಹಂಪಿ ಪೊಲೀಸ್ ಠಾಣೆ ಇನ್ಸಸ್ಪೆಕ್ಟರ್ ಶಿವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಕುರಿತು ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News