ರಾಜ್ಯದ ಇತಿಹಾಸದಲ್ಲಿ ಹೆಚ್ಚು ಸಾಲ ಮಾಡಿರುವ ಖ್ಯಾತಿ ಸಿದ್ದರಾಮಯ್ಯ ಅವರದ್ದು: ಸಿಎಂ ಬೊಮ್ಮಾಯಿ

Update: 2023-02-04 18:03 GMT

ವಿಜಯಪುರ, ಫೆ. 4: ರಾಜ್ಯದ ಇತಿಹಾಸದಲ್ಲಿ ಐದು ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಸಾಲ ಮಾಡಿರುವ ಖ್ಯಾತಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರದ್ದು ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ದೂರಿದ್ದಾರೆ.

ಶನಿವಾರ ಇಲ್ಲಿನ ಸೈನಿಕ್ ಸ್ಕೂಲ್ ಹೆಲಿಪ್ಯಾಡ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಬಜೆಟ್ ಘೋಷಣೆಗಳ ಪೈಕಿ ಕೇವಲ ಶೇ.10ರಷ್ಟು ಕಾಮಗಾರಿಗಳು ಜಾರಿಯಾಗಿವೆ. 3 ಲಕ್ಷ ಕೋಟಿ ರೂ.ಸಾಲ ಇದೆ ಎಂದಿರುವ ಬಜೆಟ್‍ನಲ್ಲಿ ಎಷ್ಟು ಅನುಷ್ಠಾನ ಗೊಂಡಿದೆ ಎಂದು ಅಧಿವೇಶನದಲ್ಲಿ ವರದಿ ನೀಡುತ್ತೇವೆ ಎಂದರು. 

ಆಂತರಿಕ ವಿಚಾರ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಗ್ಗೆ ಡಾ.ಪರಮೇಶ್ವರ್ ಅಸಮಾಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅದು ಅವರ ಆಂತರಿಕ ವಿಚಾರ. ಪರಮೇಶ್ವರ್ ಬಹಳ ಬುದ್ದಿವಂತರು. ಎಲ್ಲವನ್ನೂ ಅರಿತವರು. ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಶಾಸಕರನ್ನು ಭದ್ರ ಮಾಡಿಕೊಳ್ಳಲಿ: ಸಿದ್ದರಾಮಯ್ಯ ತಾವು ಪ್ರವಾಸ ಮಾಡುತ್ತಿರುವ ಭಾಗದ ಶಾಸಕರನ್ನು ಗಟ್ಟಿಯಾಗಿ ಹಿಡಿದುಕೊಳ್ಳಲಿ. ಕಾಂಗ್ರೆಸ್ ಪಕ್ಷದ ಶಾಸಕರನ್ನು ಭದ್ರ ಮಾಡಿಕೊಳ್ಳಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಅವರಿಗೆ ಇಷ್ಟೇ ಸಲಹೆ ನೀಡಲು ಸಾಧ್ಯ ಎಂದು ಬಸವರಾಜ ಬೊಮ್ಮಾಯಿ ಎಚ್ಚರಿಸಿದರು. 

ಕಾರ್ಕಳ ಸುನಿಲ್ ಕುಮಾರ್ ಕ್ಷೇತ್ರ: ‘ಕಾರ್ಕಳದಲ್ಲಿ ನಮ್ಮ ಮಂತ್ರಿ ಸುನಿಲ್ ಕುಮಾರ್ ಮೂರು ಬಾರಿ ಆಯ್ಕೆಯಾಗಿ ಬಂದಿದ್ದಾರೆ. ಸುನಿಲ್ ಕುಮಾರ್ ಅವರ ಕ್ಷೇತ್ರ ಕಾರ್ಕಳ. ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್‍ಗೆ ಅವರು ಮನವಿ ಮಾಡುವ ಅಧಿಕಾರವಿದೆ. ಆದರೆ, ರಾಷ್ಟ್ರೀಯ ಪಕ್ಷವಾಗಿ ನಾವು 224 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ’
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Similar News