ಯಡಿಯೂರಪ್ಪರನ್ನು ಬಿಜೆಪಿ ಹೈಕಮಾಂಡ್ ಪಂಚರ್ ಮಾಡಿಬಿಟ್ಟಿದೆ: ಸಿದ್ದರಾಮಯ್ಯ

''ನಾನು ಬಾದಾಮಿಯಿಂದ ನಿಂತರೆ ನೂರಕ್ಕೆ ನೂರು ಗೆಲ್ಲುತ್ತೇನೆ...''

Update: 2023-02-05 12:26 GMT

ಕಲಬುರಗಿ, ಫೆ. 5: ‘ಬಿ.ಎಸ್.ಯಡಿಯೂರಪ್ಪನವರ ರಥ ಪಂಚರ್ ಆಗದಿದ್ದರೆ ಸಾಕು. ಈಗಾಗಲೇ ಅವರನ್ನು ಬಿಜೆಪಿ ಹೈಕಮಾಂಡ್ ಪಂಚರ್ ಮಾಡಿಬಿಟ್ಟಿದೆ. ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದೇ ಅವರನ್ನು ಪಂಚರ್ ಮಾಡಿದಂತೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ  ಟೀಕಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಅವರ ಬಗ್ಗೆ ನನಗೆ ಕನಿಕರ ಇದೆ. ಅವರು ಆರೋಗ್ಯವಾಗಿದ್ದಾರೆಂಬುದು ಖುಷಿಯ ವಿಚಾರ. ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಹೋರಾಟ ಮಾಡುತ್ತಿದ್ದಾರೆ ಸಂತೋಷ. ಆದರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದು ಯಾಕೆ?’ ಎಂದು ಪ್ರಶ್ನಿಸಿದರು.

‘ಮತ್ತೆ ಅವರು ಮುಖ್ಯಮಂತ್ರಿ ಆಗುತ್ತಾರ? ಹೀಗಾದ್ದಾಗ ಅವರನ್ನು ನೋಡಿ ಜನ ಮತ ಹಾಕುತ್ತಾರ? ಕಳೆದ ಬಾರಿ ಯಡಿಯೂರಪ್ಪನವರೇ ಸ್ವತಃ ಮುಖ್ಯಮಂತ್ರಿಯಾಗುತ್ತೇನೆಂದು ಎಲ್ಲ ಕಡೆ ಪ್ರಚಾರ ಮಾಡಿದ್ದರು. ಆದರೂ ಗೆದ್ದಿದ್ದು 104 ಸೀಟುಗಳು ಮಾತ್ರ, ಈ ಬಾರಿ ಮುಖ್ಯಮಂತ್ರಿ ಸ್ಥಾನದಿಂದಲೂ ಕಿತ್ತು ಹಾಕಿದ್ದಾರೆ, ಇವರನ್ನು ನಂಬಿ ಜನ ಮತ ನೀಡುತ್ತಾರ?’ ಎಂದು ಅವರು ವಾಗ್ದಾಳಿ ನಡೆಸಿದರು.

ನಾವು ಕನಸು ಕಾಣುತ್ತಿರುವುದಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ವಾಸ್ತವ. ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಹೈಕಮಾಂಡ್. ಬಿಜೆಪಿ ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ, ಸರಕಾರದ ಭ್ರಷ್ಟಾಚಾರ, ಶೇ.40ರಷ್ಟು ಕಮಿಷನ್ ಹಗರಣಗಳು, ವಚನ ಭ್ರಷ್ಟತೆ ಇವುಗಳಿಂದ ಜನ ಬೇಸತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆಯೇರಿಕೆ ಆಗಿರುವುದರಿಂದ ಜನರು ಹೈರಾಣಾಗಿದ್ದಾರೆ. ಹೀಗಾದ್ದಾಗ ಮತ್ತೆ ಬಿಜೆಪಿಗೆ ಮತ ಹಾಕುತ್ತಾರ?’ ಎಂದು ಅವರು ಟೀಕಿಸಿದರು.

‘ನಾನು ಸೋಲಿನ ಭಯದಿಂದ ಕ್ಷೇತ್ರ ಹುಡುಕುತ್ತಿರುವುದಲ್ಲ, ಹತ್ತಿರದ ಕ್ಷೇತ್ರ ಬೇಕೆಂಬ ಕಾರಣಕ್ಕೆ ಹುಡುಕಾಟ ಮಾಡುತ್ತಿದ್ದೇನೆ. ಬಾದಾಮಿಯಿಂದ ನಿಂತರೆ ನೂರಕ್ಕೆ ನೂರು ಗೆಲ್ಲುತ್ತೇನೆ. ನಾನು ಕೋಲಾರದಿಂದ ಸ್ಪರ್ಧೆ ಮಾಡಿದರೆ ನೂರಕ್ಕೆ ನೂರು ಗೆಲ್ಲುತ್ತೇನೆ. ಇದಕ್ಕೆ ಹೈಕಮಾಂಡ್ ಒಪ್ಪಿಗೆ ಬೇಕು ಅಷ್ಟೇ. ನಾನು ಕೋಲಾರದಿಂದಲೇ ಸ್ಪರ್ಧೆ ಮಾಡಬೇಕೆಎಂದು ತೀರ್ಮಾನ ಮಾಡಿದ್ದೇನೆ. ಹೈಕಮಾಂಡ್‍ನ ಒಪ್ಪಿಗೆ ಸಿಕ್ಕರೆ ಕೋಲಾರದಿಂದ ನನ್ನ ಸ್ಪರ್ಧೆ ಸಾಧ್ಯ ಎಂದು ನುಡಿದರು.

ನಾನು ಕೇಂದ್ರ ಸರಕಾರಕ್ಕೆ ಯಾದಗಿರಿ, ಕಲಬುರಗಿ, ಕೊಡಗು, ಬೀದರ್ ನ ಕುರುಬರು, ಗೊಂಡ, ರಾಜಗೊಂಡ ಸಮುದಾಯವನ್ನು ಎಸ್.ಟಿ. ಸೇರಿಸಿ ಎಂದು ಶಿಫಾರಸು ಮಾಡಿದ್ದೆ. ಇವು ಕುರುಬ ಸಮುದಾಯಕ್ಕೆ ಇರುವ ಸಮಾನಾರ್ಥಕ ಹೆಸರುಗಳು. ಶಿಫಾರಸು ಮಾಡಿ 8 ವರ್ಷ ಆಯ್ತು, ಈ ವರೆಗೆ ಮಾಡಿಲ್ಲ. ಈಗ ಎರಡೂ ಕಡೆ ಬಿಜೆಪಿಯದೇ ಸರಕಾರ ಇದ್ದರೂ ಇನ್ನೂ ಆಗಿಲ್ಲ. ಇವರನ್ನು ನಂಬುತ್ತಾರ? ಕುರುಬರು ನಮ್ಮನ್ನು ಎಸ್.ಟಿ. ಸೇರಿಸಿ ಎಂದು ಹೇಳಿ ಎಷ್ಟು ದಿನ ಆಯ್ತು ಸೇರಿಸಿದ್ರಾ? ನಾನು ಶಿಫಾರಸು ಮಾಡಿದ್ದನ್ನು ಸೇರಿಸಿಲ್ಲ, ಇವರು ಹೇಳಿದ್ದನ್ನು ಸೇರಿಸಿಲ್ಲ ಎಂದು ಅವರು ಟೀಕಿಸಿದರು.

‘ಲಿಂಗಾಯತ ಪಂಚಮಸಾಲಿಗಳಿಗೆ ಮೀಸಲಾತಿ ಬದಲಾವಣೆ ಮಾಡಿಲ್ಲ, ಅದಕ್ಕೀಗ ಕೋರ್ಟ್ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ನೀಡುತ್ತಾರೆಂಬುದು ಗೊತ್ತಿದ್ದರೂ ಅವರು ಒಂದು ತೀರ್ಮಾನ ಮಾಡಲು ಹೋದರು. ಎಸ್.ಸಿ.ಗಳಿಗೆ ಶೇ.15ರಿಂದ ಶೇ.17 ಮತ್ತು ಎಸ್.ಟಿ.ಗಳಿಗೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಏರಿಕೆ ಮಾಡಿದರು. ಇದಕ್ಕೆ ಸಂವಿಧಾನ ತಿದ್ದುಪಡಿ ಮಾಡಿಸಿದರೇ? ಈ ಬಗ್ಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಸಂವಿಧಾನದ 9ನೆ ಶೆಡ್ಯೂಲ್‍ಗೆ ಸೇರಿಸುವ ಪ್ರಯತ್ನ ಮಾಡಿದ್ರಾ? ಕೇಂದ್ರ ಮತ್ತು ರಾಜ್ಯದಲ್ಲಿ ಯಾರ ಸರಕಾರ ಇದೆ? ಡಬ್ಬಲ್ ಇಂಜಿನ್ ಸರಕಾರದ ಸಾಧನೆ ಇದೆನಾ?’

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

Similar News