8ರಿಂದ 10 ಮಂದಿ BJP ಸಂಸದರು ಚುನಾವಣೆ ಸ್ಪರ್ಧೆಯಿಂದಲೇ ಹಿಂದೆ ಸರಿಯುವುದಾಗಿ ಹೇಳಿದ್ದಾರೆ: ಡಿಕೆಶಿ
''ಡಬಲ್ ಇಂಜಿನ್ ಸರಕಾರದಿಂದ ರಾಜ್ಯಕ್ಕೆ ಅನ್ಯಾಯ''
ಕನಕಪುರ: 'ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ 8ರಿಂದ 10 ಮಂದಿ ಸಂಸದರೆ ಚುನಾವಣೆ ಸ್ಪರ್ಧೆಯಿಂದಲೇ ಹಿಂದೆ ಸರಿಯುವುದಾಗಿ ಹೇಳುತ್ತಿದ್ದಾರೆ. ಸದ್ಯಕ್ಕೆ ಅವರ ಹೆಸರು ಬೇಡ' ಎಂದು ಕೆಪಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ರವಿವಾರ ಇಲ್ಲಿನ ಸಾತನೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ''ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಬಿಜೆಪಿ ಡಬಲ್ ಇಂಜಿನ್ ಸರಕಾರ ಗಮನ ಹರಿಸುತ್ತಿಲ್ಲ. ಬಿಜೆಪಿ ಸಂಸದರು ಪ್ರಶ್ನಿಸುತ್ತಿಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ 8ರಿಂದ 10 ಮಂದಿ ಸಂಸದರೆ ಚುನಾವಣೆ ಸ್ಪರ್ಧೆಯಿಂದಲೇ ಹಿಂದೆ ಸರಿಯುವುದಾಗಿ ಹೇಳುತ್ತಿದ್ದಾರೆ. ಅವರು ಒಳಗೊಳಗೆ ಭಾರೀ ಅವಮಾನ ಎದುರಿಸುತ್ತಿದ್ದಾರೆ'' ಎಂದು ತಿಳಿಸಿದರು.
'ಕಾಂಗ್ರೆಸ್ ಕೈಗೊಂಡಿರುವ ‘ಪ್ರಜಾಧ್ವನಿ ಯಾತ್ರೆ’ ಬಸ್ ಅರ್ಧದಲ್ಲೇ ಪಂಚರ್ ಆಗಲಿದೆ ಎಂಬುವವರು ‘ದಕ್ಷಿಣ ಕರ್ನಾಟಕದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಯಾತ್ರೆಗೆ ಜನ ಯಾವ ರೀತಿ ಬರುತ್ತಿದ್ದಾರೆಂದು ನಾನು ಉತ್ತರ ನೀಡುವ ಅಗತ್ಯವಿಲ್ಲ. ರಾಜ್ಯದ ಸುದ್ದಿ ಮಾಧ್ಯಮಗಳ ಕ್ಯಾಮರಾಗಳೇ ಸಾಕ್ಷಿ' ಎಂದು ಇದೇ ವೇಳೆ ತಿರುಗೇಟು ನೀಡಿದರು.