‘ಕಡವೆ’ಗಳಿಗೆ ಗುಂಡಿಕ್ಕಿದ್ದ ಪ್ರಕರಣ: ಮ್ಯಾಜಿಸ್ಟ್ರೇಟ್ ಅನುಮತಿ ಇಲ್ಲದೆ ದಾಖಲಿಸಿದ್ದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Update: 2023-02-06 13:14 GMT

ಬೆಂಗಳೂರು, ಫೆ.6: ಅರಣ್ಯದ ಒಳಗೆ ಅಕ್ರಮವಾಗಿ ಪ್ರವೇಶಿಸಿ ಗುಂಡಿಕ್ಕಿ ಎರಡು ಕಡವೆಗಳನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ದಂಡಾಧಿಕಾರಿ (ಮ್ಯಾಜಿಸ್ಟ್ರೇಟ್) ಪೂರ್ವಾನುಮತಿ ಇಲ್ಲದೇ ಎಫ್‍ಐಆರ್ ದಾಖಲಿಸಿರುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಚಿಕ್ಕಮಗಳೂರಿನ ಮಲ್ಲಂದೂರು ಠಾಣಾ ಪೊಲೀಸರು ದಾಖಲಿಸಿರುವ ಎಫ್‍ಐಆರ್ ರದ್ದು ಪಡಿಸುವಂತೆ ಕೋರಿ ಅತ್ತರ್ ಅಹ್ಮದ್ ಹಾಗೂ ರಫೀಕ್ ಅಹ್ಮದ್ ಸೇರಿದಂತೆ ಹಾಸನ ಜಿಲ್ಲೆಯ ಸಕಲೇಶಪುರದ 15 ಮಂದಿ ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠ, ಎಲ್ಲ ಆರೋಪಿಗಳ ವಿರುದ್ಧದ ಪ್ರಕರಣ ರದ್ದು ಮಾಡಿ ಆದೇಶಿಸಿದೆ.

ಅಲ್ಲದೆ, ಅಸಂಜ್ಞೇಯ ಅಪರಾಧಗಳಲ್ಲಿ ಎಫ್‍ಐಆರ್ ದಾಖಲಿಸಬೇಕಾದಲ್ಲಿ ಮ್ಯಾಜಿಸ್ಟ್ರೇಟ್ ಅನುಮತಿ ಕಡ್ಡಾಯವಾಗಿದೆ. ಆದರೆ, ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕೇಸ್‍ನಲ್ಲಿ ಆರೋಪಿಗಳು ಆರೋಪ ಮುಕ್ತರಾಗುತ್ತಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಎರಡು ಕಡವೆ ಕೊಲ್ಲಲು ಪರವಾನಗಿ ಪಡೆದ ಬಂದೂಕು ಬಳಸಲಾಗಿದೆ ಎಂಬುದಾಗಿ ಎಫ್‍ಐಆರ್ ಆರೋಪಿಸಲಾಗಿದೆ. ಆ ಆರೋಪವನ್ನು ಒಪ್ಪಿದರೂ, ಅದು ಭಾರತೀಯ ಶಸ್ತ್ರಾಸ್ತ ಕಾಯ್ದೆಯ 3, 7, 25, 37, 30 ಮತ್ತು 35 ಅಡಿ ಅಪರಾಧ ಕೃತ್ಯವಾಗುವುದಿಲ್ಲ. ಸೆಕ್ಷನ್ 30 ಮತ್ತು 35 ಅಡಿ ಆರೋಪಗಳು ಅಸಂಜ್ಞೇಯ ಅಪರಾಧ ಕೃತ್ಯಗಳಾಗಿವೆ. ಈ ಎರಡು ಸೆಕ್ಷನ್ ಅಡಿ ಎಫ್‍ಐಆರ್ ದಾಖಲಿಸಬೇಕಾದರೆ ಮ್ಯಾಜಿಸ್ಟ್ರೇಟ್ ಅವರಿಂದ ಆದೇಶ (ಪೂರ್ವಾನುಮತಿ ಅನುಮತಿ) ಪಡೆಯಬೇಕಿತ್ತು ಎಂದು ಕೋರ್ಟ್ ಗಮನಕ್ಕೆ ತಂದರು. ಈ ಅಂಶವನ್ನು ಪುರಸ್ಕರಿಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಎಫ್‍ಐಆರ್ ರದ್ದುಪಡಿಸಿದೆ.

ಪ್ರಕರಣ ಆರೋಪಿಗಳಾದ ರಫೀಕ್ ಅಹ್ಮದ್ ಮತ್ತು ಇತರ ಆರೋಪಿಗಳು 2017ರ ಜ.1ರಂದು ಎರಡು ಪರವಾನಗಿ ಬಂದೂಕು ಬಳಸಿ ಚಿಕ್ಕಮಗಳೂರು ಜಿಲ್ಲೆಯ ತಣಿಗೆ ಬೈಲು ವನ್ಯಜೀವಿ ವಲಯದಲ್ಲಿ ಎರಡು ಕಡವೆಗಳನ್ನು ಬೇಟೆಯಾಡಿ ಸಾಯಿಸಿದ್ದರು.

Similar News