ನಾವೆಲ್ಲ ಪಕ್ಷ ಸೇರದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ: ಸಂಸದ ರಮೇಶ್ ಜಿಗಜಿಣಗಿ

Update: 2023-02-07 06:56 GMT

ವಿಜಯಪುರ: 'ನಾವೆಲ್ಲ ಜನತಾ ಪರಿವಾರ ಬಿಟ್ಟು ಪಕ್ಷ ಸೇರಿರದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ' ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನೂ ಸೇರಿದಂತೆ ಹಲವಾರು ಜನ ಜನತಾ ದಳದಲ್ಲಿ ಮುಂದುವರಿದಿದ್ದರೆ ಒಂದು ಸಲ ಕಾಂಗ್ರೆಸ್ ಮತ್ತೊಂದು ಸಲ ಜನತಾ ದಳ ಅಧಿಕಾರಕ್ಕೆ ಬರುತ್ತಿದ್ದವು. ಬಿಜೆಪಿ ಅಧಿಕಾರಕ್ಕೆ ಬರುತ್ತಿರಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು. 

ಸಣ್ಣ ಪುಟ್ಟ ನಾಯಕರೆಲ್ಲ ನನ್ನ ಕೊಡುಗೆ ಏನು ಎನ್ನುತ್ತಾರೆ. ಇಷ್ಟೆಲ್ಲ ಮಾಡಿ ಒಂದು ಲಕ್ಷ ಕೋಟಿ ಹಣ ತಂದರೂ ಇವರ ಕೊಡುಗೆ ಏನು ಎಂದು ಕೇಳುತ್ತಾರೆ. ರಾಜ್ಯದಲ್ಲಿರುವ ಎರಡನೇ ಹಂತದ ಹಿರಿಯ ನಾಯಕರು ರಮೇಶ ಜಿಗಜಿಣಗಿ ಕೊಡುಗೆ ಏನು ಎಂದು ಕೇಳುವುದು ಬಹಳ ಸಣ್ಣತನವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ನನಗೆ ನನ್ನ ಪಕ್ಷದ ಬಗ್ಗೆ ಅಭಿಮಾನವಿದೆ. ಒಂದು ದಿನವೂ ಪಕ್ಷದ ಬಗ್ಗೆ ಕೆಟ್ಟ ಅಭಿಪ್ರಾಯ, ಕೆಟ್ಟ ಮಾತನ್ನು ಆಡಿಲ್ಲ. ಆದರೆ ನನ್ನ ಸಣ್ಣಪುಟ್ಟ ಯಾವುದೂ ಕೆಲಸಗಳು ಆಗಿಲ್ಲ. ಸರಕಾರ ಸರಿಯಾಗಿ ನಡೆದಿಲ್ಲ ಎಂಬ ಕಾರಣಕ್ಕೆ ಸ್ವಲ್ಪ ದೂರವಿದ್ದೇನೆ ಎಂದು ತಿಳಿಸಿದರು.

Similar News