ಬ್ರಾಹ್ಮಣರ ಕುರಿತ ಹೇಳಿಕೆ: ಕುಮಾರಸ್ವಾಮಿಯನ್ನು ತಡೆದು ಸ್ಪಷ್ಟನೆಗೆ ಆಗ್ರಹಿಸಿದ ಅರ್ಚಕ

Update: 2023-02-08 12:16 GMT

ಕಾರವಾರ, ಫೆ.8: ಮುಂಬರಲಿರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಂಚರತ್ನ ಯಾತ್ರೆ ಮೂಲಕ ರಾಜ್ಯ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿಕೆ ಕುಮಾರಸ್ವಾಮಿ ಅವರು, ಬುಧವಾರ ಗೋಕರ್ಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬ್ರಾಹ್ಮಣರ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಸಿ ಕುಮಾರಸ್ವಾಮಿ ಅವರನ್ನ ಅರ್ಚಕರೊಬ್ಬರು ತಡೆದ ಘಟನೆ ನಡೆಯಿತು.

ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಲು ಕುಮಾರಸ್ವಾಮಿ ತೆರಳುವ ವೇಳೆ ದೇವಸ್ಥಾನದ ಬಳಿ ಅವರಿಗೆ ಎದುರಾದ ಅರ್ಚಕರೊಬ್ಬರು, 'ಮೊನ್ನೆ ನೀವು ಬ್ರಾಹ್ಮಣರ ಕುರಿತು ನೀವು ಆಡಿದ ಮಾತು ತುಂಬಾ ಬೇಜಾರಾಗಿದೆ. ಹಾಗಾಗಿ ನಿಮ್ಮಿಂದ ಸ್ಪಷ್ಟನೆ ಬಯಸುತ್ತಿದ್ದೇನೆ, ನೀವು ಊರಲ್ಲೇ ಅದಕ್ಕೆ ಸ್ಪಷ್ಟೀಕರಣ ಕೊಟ್ಟು ಹೋಗಬೇಕು ಎಂದರು. ಇದಕ್ಕೆ ಸಮಜಾಯಿಷಿ ನೀಡಿದ ಕುಮಾರಸ್ವಾಮಿ ಅವರು, ''ಬಹಳ ಸ್ಪಷ್ಟವಾಗಿ ಹೇಳ್ತೀನಿ, ಮಹಾರಾಷ್ಟ್ರದ ಪೇಶ್ವೆಗಳ ಕುರಿತಾಗಿ ನಾನು ಹೇಳಿದ್ದೇನೆಯೇ ಹೊರತು ಇಲ್ಲಿನ ಬ್ರಾಹ್ಮಣರನ್ನು ನಿಂದಿಸಿಲ್ಲ. ಶೃಂಗೇರಿ ಮಠಕ್ಕೆ ದಾಳಿ ಮಾಡಿದವರ ಸಂಸ್ಕೃತಿ ಬೇಡ ಎಂದು ಹೇಳಿದ್ದೇನೆ. ನಾವು ಬ್ರಾಹ್ಮಣರ ಜತೆಗೆ ಆಡಿ ಬೆಳೆದಿದ್ದೇವೆ. ನಮ್ಮ ಕುಟುಂಬ ಸಂಸ್ಕಾರವಂತರಾಗಿರಲು ಬ್ರಾಹ್ಮಣರ ಒಡನಾಟವೂ ಕಾರಣ'' ಎಂದರು.

ಬಳಿಕ ಮಾತನಾಡಿದ  ಅರ್ಚಕ, ''ನಾನು ಹೀಗೆ ಹೇಳಿದ್ದಕ್ಕೆ ಬೇಜಾರಾಗಬೇಡಿ, ನಾನು ಕೂಡ ಜನತಾ ಪರಿವಾರದ ಹಿನ್ನೆಲೆಯವನು. ದೇವೆಗೌಡರ ಕುಟುಂಬದ ಬಗ್ಗೆ ಗೌರವ ಇದೆ. ನಿಮ್ಮ ಆಡಳಿತ ನಮಗೆ ತೃಪ್ತಿ ತಂದಿದೆ. ಆದರೆ, ಬ್ರಾಹ್ಮಣರ ಕುರಿತು ಆಡಿರುವ ಮಾತುಗಳಿಂದ ಬೇಸರವಾಗಿದೆ'' ಎಂದು ಕುಮಾರಸ್ವಾಮಿ ಅವರಿಗೆ ತಿಳಿಸಿದರು. 

Similar News