ಪ್ರಜ್ಞಾವಂತ ಮತದಾರರಿಂದ ಬಿಜೆಪಿಗೆ ಮತ್ತೊಮ್ಮೆ ಆಶೀರ್ವಾದ: ಬಿ.ವೈ.ವಿಜಯೇಂದ್ರ

Update: 2023-02-08 13:29 GMT

ಬೆಂಗಳೂರು, ಫೆ. 8: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಮರಳಬೇಕೆಂಬ ಉದ್ದೇಶದಿಂದ ವಿವಿಧ ಮೋರ್ಚಾಗಳ ಸಮಾವೇಶವನ್ನು ಯಶಸ್ವಿಯಾಗಿ ಮಾಡಲಾಗುವುದು ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಬುಧವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲೂ ಎಲ್ಲ ಮೋರ್ಚಾಗಳ ಸಮಾವೇಶ ನಡೆಸಲು ಪಕ್ಷದ ವತಿಯಿಂದ ನನ್ನನ್ನು ಸಂಚಾಲಕರನ್ನಾಗಿ, ಜಗದೀಶ್ ಹಿರೇಮನಿ ಮತ್ತು ಯಶಪಾಲ್ ಅವರನ್ನು ಸಹ ಸಂಚಾಲಕರನ್ನಾಗಿ ನೇಮಿಸಿದ್ದಾರೆ. ಇನ್ನೊಂದು ವಾರದಲ್ಲಿ ಪ್ರವಾಸದ ವಿವರವನ್ನು ತಿಳಿಸುತ್ತೇವೆ ಎಂದರು.

ಕೆಲವು ರಾಜಕೀಯ ಪಕ್ಷಗಳು ದಿವಾಳಿ ಆಗಿವೆ. ತಮ್ಮ ಸಾಧನೆ ಏನು? ಜನರಿಗೆ ಏನು ಹೇಳಬೇಕು ಎಂಬ ಗೊಂದಲದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸುಳ್ಳು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ. ಇದು ಆ ಪಕ್ಷದ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ವಿಜಯೇಂದ್ರ ಹೇಳಿದರು.

ಯಾವ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತಂದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂಬುದನ್ನು ರಾಜ್ಯದ ಪ್ರಜ್ಞಾವಂತ ಮತದಾರರು ಅರಿತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಏನೇ ಹೇಳಿಕೆ ಕೊಟ್ಟರೂ ಮತದಾರರು ಮತ್ತೊಮ್ಮೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು ಹಾಗೂ ನನ್ನ ಬಗ್ಗೆ ಅನುಕಂಪದ ಮಾತನ್ನಾಡುವ ಮೂಲಕ ನಮ್ಮ ಪಕ್ಷದಲ್ಲಿ ಬೆಂಕಿ ಹಚ್ಚಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಅವುಗಳಿಗೆ ಆಸ್ಪದ ಕೊಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯ ಎಲ್ಲ ನಾಯಕರು ಒಗ್ಗಟ್ಟಾಗಿದ್ದಾರೆ. ಯಾವುದೇ ರೀತಿಯ ಗೊಂದಲಗಳಿಲ್ಲ. ಕನಿಷ್ಠ 140ರಿಂದ 150 ಶಾಸಕ ಸ್ಥಾನ ಗೆಲ್ಲುವುದೇ ಎಲ್ಲರ ಗುರಿಯಾಗಿದೆ ಎಂದು ವಿಜಯೇಂದ್ರ ಹೇಳಿದರು.

Similar News