ಶಿವಮೊಗ್ಗ | ಈಡಿಗರ ಹಾಸ್ಟೆಲ್ಗೆ ಅನುದಾನ ನೀಡಲು ಸಿಎಂ ಬೊಮ್ಮಾಯಿಗೆ ಮನವಿ
ಶಿವಮೊಗ್ಗ,ಫೆ.8: ಜಿಲ್ಲಾ ಆರ್ಯ ಈಡಿಗ ಸಂಘದಿಂದ ವಿದ್ಯಾರ್ಥಿ/ವಿದ್ಯಾರ್ಥಿನಿ ನಿಲಯ ಸ್ಥಾಪನೆಗೆ 5 ಕೋಟಿ ರೂ.ಅನುದಾನ ನೀಡಬೇಕೆಂದು ಬುಧವಾರ ನಗರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ವಾರ್ಡ್ ನಂ.10 ರಲ್ಲಿನ ಟ್ಯಾಂಕ್ ಮೊಹಲ್ಲಾದಲ್ಲಿ ವಿಸ್ತಾರವಾದ ಸ್ವಂತ ನಿವೇಶನವನ್ನು ಸಂಘ ಹೊಂದಿದೆ. ಜಿಲ್ಲೆಯ ಬಹುಸಂಖ್ಯಾತ ಸಮುದಾಯವಾದ ಈಡಿಗರು, ಮಲೆನಾಡಿನ ಕುಗ್ರಾಮಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಅಲ್ಲಿನ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಭ್ಯಾಸಕ್ಕೆ ಅನುಕೂಲವಾಗಲು ಸಂಘದ ವತಿಯಿಂದ ಹಾಸ್ಟೆಲ್ ನಡೆಸಲಾಗುವುದು. ಹಿಂದುಳಿವ ವರ್ಗಗಳ ಕಲ್ಯಾಣ ಇಲಾಖೆಯಿಂದ ಮುಖ್ಯಮಂತ್ರಿಗಳ ನಿಧಿಯಾಗಿ 5 ಕೋಟಿ ಅನುದಾನ ನೀಡಬೇಕೆಂದು ಮನವಿ ಪತ್ರದಲ್ಲಿ ಕೋರಲಾಗಿದೆ. ಮನವಿ ಪಡೆದ ಮುಖ್ಯಮಂತ್ರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರಲ್ಲದೆ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಈ ಸಂದರ್ಭ ಆರ್ಯಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಕಾರ್ಯದರ್ಶಿ ಎಸ್.ಸಿ ರಾಮಚಂದ್ರ, ಉದ್ಯಮಿ ಸುರೇಶ್ ಕೆ. ಬಾಳೇಗುಂಡಿ, ಹೆಚ್.ಎನ್.ಮಹೇಂದ್ರ, ತೇಕಲೆ ರಾಜಪ್ಪ ಇದ್ದರು.