ತುಳಿತಕ್ಕೊಳಗಾದವರಿಗೆ ಆತ್ಮಸ್ಥೈರ್ಯ ತುಂಬುವುದು ಸಂಘ-ಸಂಸ್ಥೆಗಳ ಜವಾಬ್ದಾರಿ: ಹರೇಕಳ ಹಾಜಬ್ಬ
ಮೂಡಿಗೆರೆ, ಫೆ.9: ಸಂಘ ಸಂಸ್ಥೆಗಳು ಸಾಮಾಜಿಕ ಕ್ಷೇತ್ರದ ಆಧಾರ ಸ್ತಂಭವಿದ್ದಂತೆ, ಅದನ್ನು ಬಳಸಿಕೊಂಡು ತುಳಿತಕ್ಕೊಳಗಾದವರ ಪರನಿಂತು ಅವರಿಗೆ ಆತ್ಮಸ್ಥೈರ್ಯ ತುಂಬಿದರೆ ಕಡುಬಡವರು ಕೂಡ ಉತ್ತಮ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಅಕ್ಷರಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ತಿಳಿಸಿದರು.
ಬುಧವಾರ ಪಟ್ಟಣದಲ್ಲಿ ತಾಲೂಕು ಬ್ಯಾರಿ ಒಕ್ಕೂಟದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಾತಿ, ಧರ್ಮ ಎಂಬ ಕಂದಕವನ್ನು ಬದಿಗಿಟ್ಟು ಎಲ್ಲರೂ ಮಾನವ ಜಾತಿಗೆ ಸೇರಿದವರೆಂದು ಚಿಂತಿಸುವವರಿಗೆ ಸಮಾಜದಲ್ಲಿ ಸುಧಾರಣೆ ತರುವ ಭರವಸೆ ಇರುತ್ತದೆ. ಅಂತಹ ಆದರ್ಶ ವ್ಯಕ್ತಿಗಳು ಜನಪರವಾದ ಸೇವಾ ಕಾರ್ಯದಲ್ಲಿ ತೊಡಗುತ್ತಾರೆ. ಶಿಕ್ಷಣ ಪಡೆಯದ ಕೆಲವರು ಸರಕಾರಿ ಅಥವಾ ಖಾಸಗಿ ಕಚೇರಿಗಳಿಗೆ ನಿತ್ಯ ಅಲೆದಾಟ ನಡೆಸಬೇಕಾಗುತ್ತದೆ. ಯಾರೊಂದಿಗಾದರೂ ಹೋಗಿ ಮಾತನಾಡಿ ಕಚೇರಿ ಕೆಲಸ ಮಾಡಿಸಿಕೊಳ್ಳಬೇಕೆಂಬ ಸಾಮಾನ್ಯ ಅರಿವು ಅನಕ್ಷರಸ್ಥರಿದಿರುವುದಿಲ್ಲ. ಶಿಕ್ಷಣ ಪಡೆಯದಿರುವುದು ಅನಕ್ಷರಸ್ಥರ ತಪ್ಪಲ್ಲ. ಶಿಕ್ಷಣದಿಂದ ವಂಚಿಸುವುದು ತಪ್ಪು ಎಂದರು.
ಬಡತನವೆಂಬುದು ಶಿಕ್ಷಣವನ್ನೇ ಕಸಿದುಕೊಳ್ಳುತ್ತದೆ. ಪ್ರಾಯ ಕಳೆದ ನಂತರ ಶಿಕ್ಷಣ ತಲೆಗೆ ಹತ್ತುವುದು ಅಸಾಧ್ಯ. ಅಂತಹ ಅನಕ್ಷರಸ್ಥರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಬಗ್ಗೆಯೂ ಯೋಚಿಸುವುದಿಲ್ಲ. ಇದು ಬಹುದೊಡ್ಡ ದುರಂತವಾಗಿದೆ. ಅನಕ್ಷರಸ್ಥ ಕುಟುಂಬದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಂಘ-ಸಂಸ್ಥೆಗಳು ಮುಂದೆ ಬರಬೇಕು. ಈಗಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸರಕಾರ ವಿದ್ಯಾರ್ಥಿಗಳಿಗೆ ವಿವಿಧ ಸವಲತ್ತುಗಳನ್ನು ಒದಗಿಸುತ್ತದೆ. ಶ್ರೀಮಂತ ಕಂಪೆನಿಗಳು, ಸಂಘ-ಸಂಸ್ಥೆಗಳು ವಿದ್ಯಾರ್ಥಿವೇತನ ನೀಡುವುದು ಬಡ ಮಕ್ಕಳ ಶಿಕ್ಷಣಕ್ಕೆ ವರದಾನವಾಗಿದೆ ಎಂದು ನುಡಿದರು.
ತಾಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಬಿಎಚ್.ಮುಹಮ್ಮದ್ ಮಾತನಾಡಿ, ತಮ್ಮದು ಒಂದು ಜನಾಂಗದ ಒಕ್ಕೂಟವಾಗಿದ್ದರೂ ಕೂಡ ನಮ್ಮ ಒಕ್ಕೂಟ ಎಲ್ಲಾ ಧರ್ಮದವರಿಗೂ ಸೇವೆ ಒದಗಿಸಲು ಸಿದ್ಧವಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಎಲ್ಲರೂ ಗೌರವಯುತವಾದ ಜೀವನ ನಡೆಸಬೇಕೆಂಬುದೆ ಒಕ್ಕೂಟದ ಆಶಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬ್ಯಾರಿ ಒಕ್ಕೂಟದ ಉಪಾಧ್ಯಕ್ಷ ಕಿರುಗುಂದ ಅಬ್ಬಾಸ್, ತಾಲೂಕು ಅಧ್ಯಕ್ಷ ಬಿ.ಎಚ್.ಮಹಮ್ಮದ್, ಹಳೆಮೂಡಿಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಎಲ್.ಬಿ.ರಮೇಶ್, ವಕೀಲ ರಿಜ್ವಾನ್ ಆಲಿ, ಮುಖಂಡರಾದ ಎಂ.ಎಚ್.ಮಹಮ್ಮದ್ ಹೈದ್ರೋಸ್, ಪಿ.ಕೆ.ಹಮೀದ್, ಕರೀಮ್, ಲತೀಫ್, ಮಹಮ್ಮದ್ ಅಲಿ, ಇಬ್ರಾಹಿಂ ಯಾದಗಾರ್, ಮಹಬೂಬ್, ಶರೀಫ್ ಮತ್ತಿತರದಿದ್ದರು.