ಸಿದ್ದೇಶ್ವರ ಶ್ರೀಗಳ ಜೀವನ ಚರಿತ್ರೆ ಕೈದಿಗಳಿಗೆ ತೋರಿಸಿ: ಸದನದಲ್ಲಿ ಯು.ಟಿ.ಖಾದರ್ ಸಲಹೆ

ಸಿದ್ದೇಶ್ವರ ಸ್ವಾಮಿ ಸಹಿತ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

Update: 2023-02-10 14:38 GMT

ಬೆಂಗಳೂರು, ಫೆ. 10: ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ, ಹಿನ್ನೆಲೆ ಗಾಯಕಿ ವಾಣಿ ಜಯರಾಂ, ಚಿತ್ರ ಕಲಾವಿದ ಬಿ.ಕೆ.ಎಸ್.ವರ್ಮಾ, ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶುಕ್ರವಾರ ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣದ ಬಳಿಕ ವಿಧಾನಸಭೆ ಸಮಾವೇಶನಗೊಂಡಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿ ಅಗಲಿದ ಗಣ್ಯರು ಹೆಸರುಗಳನ್ನು ಸದನದ ಗಮನಕ್ಕೆ ತಂದರು.

'ಸತ್ಯ ಹೇಳುತ್ತಿದ್ದರು' ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಸಭಾ ನಾಯಕರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಸತ್ಯ ಅಪ್ರಿಯ’ ಎಂಬ ಮಾತಿದೆ. ಆದರೆ, ಸಿದ್ದೇಶ್ವರ ಶ್ರೀಗಳು ಸತ್ಯ ಎಲ್ಲರಿಗೂ ಪ್ರಿಯವಾಗುವಂತೆ ಹೇಳುತ್ತಿದ್ದರು. ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕಿರುತ್ತಾನೆ ಎಂಬುದಕ್ಕೆ ಸ್ವಾಮೀಜಿ ಸಾಕ್ಷಿ. ಅವರಿಗೆ ಸಂತಾಪ ಸೂಚಿಸುವ ಅಗತ್ಯವಿಲ್ಲ ಅವರು ನಮ್ಮೊಂದಿಗೆ ಜೀವಂತ ಇದ್ದಾರೆ ಎಂದು ನುಡಿದರು.

ಸಿದ್ದೇಶ್ವರ ಶ್ರೀಗಳ ಜೀವನ ಚರಿತ್ರೆ ಕೈದಿಗಳಿಗೆ ತೋರಿಸಿ: ಯು.ಟಿ.ಖಾದರ್

‘ಬ್ರಹ್ಮಜ್ಞಾನಿ ಆಗಿದ್ದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಜೀವನ ಚರಿತ್ರೆಯನ್ನು ಚಲನಚಿತ್ರ ತಯಾರಿಸಿ ಅಪರಾಧ ಕೃತ್ಯಗಳನ್ನು ಎಸಗಿ ವಿವಿಧ ಕಾರಾಗೃಹಗಳಲ್ಲಿನ ಕೈದಿಗಳು ಸೇರಿದಂತೆ ಯುವಕರಿಗೆ ತೋರಿಸುವುದು ಸೂಕ್ತ. ಇದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ’ ಎಂದು ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ಸಲಹೆ ನೀಡಿದರು.

ಸಾವಿನ ಮೌಲ್ಯ ಹೆಚ್ಚಿಸಿದರು: ‘ಸಿದ್ದೇಶ್ವರ ಶ್ರೀಗಳ ಸಾವು ಸಾವಿನ ಮೌಲ್ಯವನ್ನು ಹೆಚ್ಚಿಸಿದೆ’ ಎಂದು ಗಾಂಧಿ ಹತ್ಯೆ ಸಂದರ್ಭದಲ್ಲಿ ಮುಖಂಡರೊಬ್ಬರ ಹೇಳಿಕೆ ಉಲ್ಲೇಖಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ವೈದಿಕ ಆಚರಣೆಗಳನ್ನು ಧಿಕ್ಕರಿಸಿ, ಶರಣ ಸಂಸ್ಕೃತಿಯನ್ನು ತಮ್ಮ ಜೀವನದ ಕೊನೆ ಮತ್ತು ಅನಂತರವೂ ಪಾಲಿಸಿದ ಅಪರೂಪದ ಆದರ್ಶಪ್ರಾಯರು ಸಿದ್ದೇಶ್ವರ ಸ್ವಾಮೀಜಿ’ ಎಂದು ಸ್ಮರಿಸಿದರು.

‘ಬ್ರಹ್ಮಚರ್ಯ ಪಾಲಿಸಲು ತೊಡಕನ್ನುಂಟು ಮಾಡುವ ಆಹಾರ ಪದಾರ್ಥಗಳನ್ನು ಸಂಪೂರ್ಣ ತ್ಯಜಿಸಿದ್ದ ಸಿದ್ದೇಶ್ವರ ಶ್ರೀಗಳಿಗೆ ‘ಕಾವಿ’ಯ ಬಗ್ಗೆ ಸಂಶಯವಿತ್ತೆ ಎಂಬ ಅನುಮಾನ ಕಾಡುತ್ತಿದೆ. ಹೀಗಾಗಿಯೆ ಅವರು ಸ್ವಾಮಿ ಆಗಿದ್ದರೂ ಕಾವಿ ಧರಿಸಿದೆ ಬಿಳಿ ಬಟ್ಟೆಯನ್ನು ಧರಿಸುತ್ತಿದ್ದರು. ಜೊತೆಗೆ ‘ಜೇಬು’ ಇಲ್ಲದ ಅಂಗಿಯನ್ನೆ ಧರಿಸುತ್ತಿದ್ದರು. ‘ಅವರದ್ದು ಜೇಬಿಲ್ಲದ ಅಂಗಿ, ನಮ್ಮದು ಅಂಗಿಯ ತುಂಬಾ ಜೇಬುಗಳು’ ಎಂದು ರಮೇಶ್ ಕುಮಾರ್, ಜನರ ದುರಾಸೆಯನ್ನು ಲೇವಡಿ ಮಾಡಿದರು.

ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಕಾನೂನು ಸಚಿವ ಮಾಧುಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಹಿರಿಯ ಸದಸ್ಯ ಎಚ್.ಕೆ.ಪಾಟೀಲ್, ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಹಲವು ಸದಸ್ಯರು ಮಾತನಾಡಿದರು. ಆ ಬಳಿಕ ಅಗಲಿದ ಗಣ್ಯರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

ಪಠ್ಯದಲ್ಲಿ ಅಳವಡಿಸಿ: ‘ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳ ಆದರ್ಶ ಮತ್ತು ತತ್ವಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕು. ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿದ್ದ ಶ್ರೀಗಳ ಜೀವನ, ಆದರ್ಶ ಹಾಗೂ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’
-ಶಶಿಕಲಾ ಜೊಲ್ಲೆ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ

Similar News