ತುಮಕೂರು: ರಸ್ತೆ ಅಪಘಾತದಲ್ಲಿ ನವದಂಪತಿ ಸ್ಥಳದಲ್ಲೇ ಮೃತ್ಯು

Update: 2023-02-11 15:25 GMT

ಚಿಕ್ಕನಾಯಕನಹಳ್ಳಿ (ತುಮಕೂರು): ಪಟ್ಟಣದ ಹೊರವಲಯದ ಹುಳಿಯಾರು ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ನವದಂಪತಿ ಸ್ಥಳದಲ್ಲೇ ಮೃತಪಟ್ಟಿರುವುದು ಶನಿವಾರ ವರದಿಯಾಗಿದೆ.

ಮೃತ ದಂಪತಿಯನ್ನು ರಘು ಮತ್ತು ಅನುಷ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ  ಕಾರಿನ ಚಾಲಕ ಭರತ್‌ಕುಮಾರ್‌ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ದಂಪತಿ ಮದುವೆಗೆಂದು ತಾಲೂಕಿನ ತಿಗಡನಹಳ್ಳಿಯಿಂದ ಕಾರಿನಲ್ಲಿ ಬಳ್ಳಾರಿಗೆ ಪ್ರಯಾಣಿಸುತ್ತಿದ್ದರು. ಎದುರಿನಿಂದ ಬರುತ್ತಿದ್ದ ಲಾರಿ ಢಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ.

ಮೃತರು ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಅನುಷ ತಿಗಡನಹಳ್ಳಿಯವರಾದರೆ, ರಘು ಅರಸೀಕೆರೆ ತಾಲೂಕಿನ ಮಾದನಹಳ್ಳಿಯವರೆಂದು ತಿಳಿದು ಬಂದಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾರು ಮತ್ತು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News