ರಿಸ್ಕ್ ತಗೊಂಡು ಕೆಲಸ ಮಾಡಿದರೆ ನಿಮ್ಮ ರಕ್ಷಣೆಗೆ‌ ಬಲವಾದ ಕಾನೂನು ತರುತ್ತೇನೆ: ವೈದ್ಯರಿಗೆ ಸಚಿವ ಮಾಧುಸ್ವಾಮಿ

''ಕರಾವಳಿ ಭಾಗದ ವೈದ್ಯರು ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಾರೆ''

Update: 2023-02-11 19:10 GMT

ತುಮಕೂರು.ಫೆ.11: 'ಸರಕಾರಿ ವೈದ್ಯರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ರೋಗಿಗಳನ್ನು ಮೇಲ್ಮಟ್ಟದ ಆಸ್ಪತ್ರೆಗೆ ರೇಪರ್ ಮಾಡುವ ಪೋಸ್ಟ್ ಮನ್ ಕೆಲಸದ ಬದಲು, ತಮ್ಮ ಶಕ್ತಿಯನ್ನು ಅರಿತು, ಅದರ ಪೂರ್ಣ ಸದ್ವಿನಿಯೋಗಕ್ಕೆ ಮುಂದಾದರೆ, ದೇವರ ಮಕ್ಕಳಾದ ಬಡವರ ಕಣ್ಣಿಗೆ ನೀವೇ ದೇವರಾಗುತ್ತೀರಿ' ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ ನೀಡಿದ್ದಾರೆ.

ನಗರದ ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿರುವ ಡಾ.ಹೆಚ್.ಎಂ.ಗಂಗಾಧರಯ್ಯ ಮೇಮೊರಿಯಲ್ ಹಾಲ್‍ನಲ್ಲಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ 30ನೇ ರಾಜ್ಯ ಮಟ್ಟದ ಸಮ್ಮೇಳನ ಕಲ್ಪತರು ವೈದ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ''ಯಾವ ವೈದ್ಯರೂ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ. ಯಾವುದೂ ಮಾಡದೇನೆ ರಕ್ಷಣೆ ಬೇಕು, ತಪ್ಪು ಮಾಡಿದಾಗ ಅಮಾನತು ಮಾಡಬಾರದು ಅಂದರೆ ಆಗಲ್ಲ. ನೀವು ನಿಮ್ಮ ಕಲಿತ ವಿದ್ಯೆಯ ಸಂಪೂರ್ಣ ಬಳಕೆಗೆ ಮುಂದಾದರೆ ನಿಮ್ಮ ಪರವಾಗಿ ಕಾನೂನು ಮಂತ್ರಿಯಾಗಿ ನಾನು ನಿಲ್ಲಲ್ಲು ಸಿದ್ಧ'' ಎಂದ ಅಭಯ ನೀಡಿದರು. 

''ವೈದ್ಯರ ಕೆಲಸ ಅವಿರತ ಶ್ರಮವಿರುವ ಕೆಲಸ. ಕೋವಿಡ್ ಸಂದರ್ಭದಲ್ಲಿ ನಮ್ಮ ಸರಕಾರಿ ವೈದ್ಯರು ಹಾಗೂ ಅವರ ಸಿಬ್ಬಂದಿ ವರ್ಗ ತೆಗದುಕೊಂಡು ನಿರಂತರ ಪರಿಶ್ರಮದ ಫಲವಾಗಿ ಬಹುಬೇಗ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಲು ಸಾಧ್ಯವಾಯಿತು.ಇದಕ್ಕಾಗಿ ನಾನು ನಾಡಿನ ಎಲ್ಲ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸರಕಾರಿ ಶಾಲೆಯ ಶಿಕ್ಷಕರು ಮತ್ತು ಸರಕಾರಿ ಆಸ್ಪತ್ರೆಯ ವೈದ್ಯರು ಪ್ರತಿಭಾವಂತರು, ಆದರೆ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲು ಹಿಂದೇಟು ಹಾಕುವ ಪರಿಣಾಮ, ಈ ವಲಯದಲ್ಲಿ ಖಾಸಗಿ ಶಾಲೆಗಳು,ಆಸ್ಪತ್ರೆಗಳು ವಿಜೃಂಭಿಸುತ್ತಿವೆ.ನಿಮ್ಮ ಬಳಿ ಬರುವ ದೇವರ ಮಕ್ಕಳಿಗೆ ಒಳ್ಳೆಯ ಸೇವೆ ನಿಮ್ಮಿಂದ ದೊರೆತರೆ,ಅದು ಭಗವಂತನಿಗೆ ಪ್ರೀತಿಯಾಗುತ್ತದೆ. ಜನರ ಹೃದಯದಲ್ಲಿ ಸ್ಥಾನಗಳಿಸುತ್ತೀರಿ. ರೋಗಿಗಳ ಬಗ್ಗೆ ಅಸಡ್ಡೆ ತೊರದೆ,ಆತನನ್ನು ಪರೀಕ್ಷಿಸಿದ ನಾಲ್ಕು ಸಾಂತ್ವನದ ಮಾತುಗಳನ್ನು ಹೇಳುವುದರಿಂದ ನೀವು ನೀಡುವ ಚಿಕಿತ್ಸೆ ದೇಹಕ್ಕಿಂತ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ'' ಎಂದು ಕಿವಿ ಮಾತು ಹೇಳಿದರು.

'ವೈದ್ಯರು ಸಲ್ಲಿಸಿರುವ ಮನವಿಯನ್ನು ಸರಕಾರದ ಸಂಬಂಧ ಪಟ್ಟ ಮಂತ್ರಿಗಳಿಗೆ ಸಲ್ಲಿಸುವ ಕೆಲಸ ಮಾಡುತ್ತೇನೆ. ಅಲ್ಲದೆ ಸರಕಾರ ಸಿ & ಆರ್. ನಿಯಮ ರೂಪಿಸಿ ಕಾನೂನು ಇಲಾಖೆಗೆ ಕಳುಹಿಸಿದರೆ ಒಂದೇ ವಾರದಲ್ಲಿ ಅದನ್ನು ಮಂಜೂರು ಮಾಡಿ ಕಳುಹಿಸಲು ನಾವು ಸಿದ್ಧರಿದ್ದೇವೆ' ಎಂದು ಭರವಸೆ ನೀಡಿದರು.

ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಕೋವಿಡ್ ಸಮಯದಲ್ಲಿ ಎರಡು ವರ್ಷಗಳ ನಿಮ್ಮ ಜೊತೆ ಕೆಲಸ ಮಾಡಿ, ನಿಮ್ಮ ಕಷ್ಟ ಸುಖಃಗಳ ಅರಿವಿದೆ.ಸಿಬ್ಬಂದಿಗಳ ಕೊರತೆಯ ನಡುವೆಯೂ ನಿಮ್ಮ ಸೇವೆ ಶ್ಲಾಘನೀಯ. ಆರೋಗ್ಯ ಕ್ಷೇತ್ರ ಅದ್ಯತಾ ವಲಯ. ಮುಖ್ಯಮಂತ್ರಿಗಳಿಗೆ ನಿಮ್ಮ ಕಷ್ಟದ ಅರಿವಿದೆ. ನಿಮ್ಮ ನೆರವಿಗೆ ಬರಲಿದ್ದಾರೆ ಎಂಬ ನಂಬಿಕೆ ನಮಗಿದೆ ಎಂದರು.

''ಕರಾವಳಿ ಭಾಗದ ವೈದ್ಯರು ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಾರೆ. ದಕ್ಷಿಣ ಕನ್ನಡದ ವೈದ್ಯರು ರೋಗಿಗಳಿಗೆ ಕನಿಷ್ಠ ಎರಡು ನಿಮಿಷ ಆದರೂ ಕೌನ್ಸೆಲಿಂಗ್ ಮಾಡುತ್ತಾರೆ. ಆದರೆ, ಈ ಭಾಗದ ವೈದ್ಯರು ರೋಗಿಗಳನ್ನೇ ಮುಟ್ಟಲ್ಲ, ಇನ್ ಫೆಕ್ಶನ್ ಆಗುತ್ತದೆ ಎಂದು ಹೇಳಿ ಚರ್ಮನೂ ಮುಟ್ಟಲ್ಲ. ರೋಗಿಗಳಿಗೆ ಔಷಧಿಗಿಂತ ವೈದ್ಯರ ಒಳ್ಳೆ ಮಾತು ಮುಖ್ಯ'' 

 ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ಸಚಿವರು 

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಡಾ.ಎಂ.ಇಂದುಮತಿ,ಡಾ.ಪ್ರಮಿಳಾ ಮರೂರ್ ಮಾತನಾಡಿದರು.ವೇದಿಕೆಯಲ್ಲಿ ವೀಕ್ಷಕರಾದ ಡಾ.ರವಿ,ಮಾಜಿ ಅಧ್ಯಕ್ಷ ಡಾ.ರಂಗನಾಥ್,ಡಾ.ಸೈಯದ್ ಮದಿನಿ,ಡಾ.ಮೇಟಿ, ಸರಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಚೇತನ್, ಡಾ.ಡಿ.ಎಂ.ಗೌಡ, ಡಾ.ಚಂದನ್, ಡಿಹೆಚ್‍ಓ ಡಾ. ಮಂಜುನಾಥ್, ಡಿ.ಎಸ್. ಡಾ.ವೀಣಾ, ಡಾ.ರಜಿನಿ ಡಾ.ದಿನೇಶ್, ಡಾ.ಸನತ್, ಡಾ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಸರಕಾರಿ ವೈದ್ಯರು ಹಾಗೂ ಸರಕಾರಿ ಶ್ರುಶೂಷಕ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಪ್ರಸ್ತುತ ಪಡಿಸಿದರು.ವೀರಗಾಸೆ,ಡೊಳ್ಳು ಮತ್ತು ಚಂಡೆ ವಾದ್ಯಕ್ಕೆ ವೈದ್ಯರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

Similar News