ಅಧಿಕಾರ ನಡೆಸುವವರ ಕೈ ಹಿಡಿದುಕೊಂಡಾದರೂ ಆಡಳಿತ ನಡೆಸುತ್ತೇನೆ...: ಮೈತ್ರಿ ಸುಳಿವು ನೀಡಿದ ಜನಾರ್ದನ ರೆಡ್ಡಿ

Update: 2023-02-11 18:46 GMT

ಬೆಳಗಾವಿ: 'ಮುಂಬರಲಿರುವ ವಿಧಾನಸಭೆ ಚುನಾವಣೆ ಬಳಿ ನಾನೇ ರಾಜ್ಯದ ಅಧಿಕಾರ ಕೈಯಲ್ಲಿ ತೆಗೆದುಕೊಳ್ಳುತ್ತೇನೆ. ಇಲ್ಲವಾದರೆ ಅಧಿಕಾರ ನಡೆಸುವವರ ಕೈ ಹಿಡಿದುಕೊಂಡಾದರೂ ಆಡಳಿತ ನಡೆಸುತ್ತೇನೆ' ಎಂದು ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಅವರು ಶನಿವಾರ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಹಿರೇರೆಡ್ಡಿ ಆಯಿಲ್ ಮಿಲ್ ಮೈದಾನದಲ್ಲಿ ಮಹಾಯೋಗಿ ವೇಮನರ 611ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. 

'ನನ್ನ ಕೈ ಯಾರು ಹಿಡಿಯುತ್ತಾರೆ, ನಾನು ಯಾರ ಕೈ ಹಿಡಿಯಲಿದ್ದೇನೆ ಎಂಬುದು ಚುನಾವಣಾ ಫಲಿತಾಂಶದ ಬಳಿಕವೇ ಗೊತ್ತಾಗಲಿದೆ'' ಎಂದು ಹೇಳುವ ಮೂಲಕ ಕುತೂಹಲ ಸೃಷ್ಟಿಸಿದರು. 

''ಪ್ರತ್ಯೇಕ ರಾಜ್ಯದ ಬಗ್ಗೆ ಯೋಚನೆ ಬೇಡ''

'ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 10 ದಿನ ಹೋರಾಟ ಮಾಡಿದರೆ ಸಾಕು, ಎಲ್ಲ ಪಕ್ಷಗಳ ದೊಡ್ಡ, ದೊಡ್ಡ ನಾಯಕರು ಬಂದು ಚಿನ್ನದ ಪ್ಲೇಟ್‌ನಲ್ಲಿ ಪ್ರತ್ಯೇಕ ರಾಜ್ಯ ಕೊಡುತ್ತಾರೆ. ನಾವು ಆ ತಪ್ಪು ಕೆಲಸ ಮಾಡುವುದು ಬೇಡವೇ ಬೇಡ' ಎಂದು ಜನಾರ್ದನ ರೆಡ್ಡಿ ಹೇಳಿದರು. 

'ರಾಜ್ಯದ ಬಜೆಟ್‌ನಲ್ಲಿ ಹೆಚ್ಚಿನ ಹಣ ಬೆಂಗಳೂರ ಭಾಗಕ್ಕೆ ಖರ್ಚು ಮಾಡಲಾಗುತ್ತಿದೆ. ನಮ್ಮ ತೆರಿಗೆಯ ಹಣದ ಶೇ. 80 ರಷ್ಟು ಹಣವನ್ನು ಬೆಂಗಳೂರು ಅಭಿವೃದ್ಧಿಗೆ ನೀಡಲಾಗುತ್ತದೆ. ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆ ಹಣದಲ್ಲಿ ಹೆಚ್ಚಿನ ಹಣ ಬೆಂಗಳೂರಿಗೆ ಖರ್ಚು ಮಾಡಲಾಗುತ್ತಿದೆ. ಇದು ದುರಂತ' ಎಂದು ಬೇಸರ ವ್ಯಕ್ತಪಡಿಸಿದರು. 

Similar News