ನಮಗೆ ಟಿಪ್ಪುನೂ ಬೇಕು, ಅಬ್ಬಕ್ಕಾನೂ ಬೇಕು: ಅಮಿತ್ ಶಾಗೆ ಕುಮಾರಸ್ವಾಮಿ ತಿರುಗೇಟು

"ಶೃಂಗೇರಿ ಮಠಕ್ಕೆ ಭದ್ರತೆ ನೀಡಿದ್ದು ಟಿಪ್ಪು"

Update: 2023-02-12 15:15 GMT

ಅರಸೀಕೆರೆ: ಟಿಪ್ಪುವನ್ನು ಬೆಂಬಲಿಸುವ ಕಾಂಗ್ರೆಸ್-ಜೆಡಿಎಸ್ ಗೆ ಮತ ನೀಡುತ್ತಿರಾ ಅಥವಾ ಅಬ್ಬಕ್ಕನನ್ನು ಗೌರವಿಸುವ ಬಿಜೆಪಿಗೆ ಮತ ನೀಡುತ್ತೀರಾ ಎಂದು ಪ್ರಶ್ನಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನಮಗೆ ಶೃಂಗೇರಿ ಮಠಕ್ಕೆ ಭದ್ರತೆ ನೀಡಿದ ಟಿಪ್ಪುನೂ ಬೇಕು, ಅಬ್ಬಕ್ಕಾನೂ ಬೇಕು ಎಂದು ಹೇಳಿದ್ದಾರೆ.

ಜೆಡಿಎಸ್ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮಗೆ ಸಮಾಜದ ಹಿತವನ್ನು ಕಾಯುವ ಟಿಪ್ಪುನೂ ಬೇಕು ಮತ್ತು ರಾಣಿ ಅಬ್ಬಕ್ಕಾನೂ ಬೇಕು. ಶೃಂಗೇರಿ ಮಠದ ಮೇಲೆ ದಾಳಿಯಾದಾಗ ಅವರಿಗೆ ರಕ್ಷಣೆ ನೀಡಿ ಕಾಪಾಡಿದ್ದು ಇದೇ ಟಿಪ್ಪು. ಅದರ ಬಗ್ಗೆ ಅರಿವಿಲ್ಲದ ಜನರು ಏನೇನೊ ಮಾತನಾಡುತ್ತಾರೆ ಎಂದರು.

ನಾನು ಪ್ರತಿ ದಿನ ಇಷ್ಟೊಂದು ಸುತ್ತಾಟ ನಡೆಸಿ ಹೋರಾಟ ಮಾಡುತ್ತಿರುವುದು ಮುಖ್ಯಮಂತ್ರಿ ಆಗಬೇಕು ಎಂಬ ಉದ್ದೇಶಕ್ಕಿಂತ ಹೆಚ್ಚಾಗಿ, ನಮ್ಮ ತಂದೆ ಬೆವರು ಸುರಿಸಿ ಕಷ್ಟಪಟ್ಟು ಇಷ್ಟು ವರ್ಷ ಕಟ್ಟಿಸಿದ ಜೆಡಿಎಸ್ ಪಕ್ಷ ಮತ್ತೊಮ್ಮೆ ಸಂಪೂರ್ಣ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವುದನ್ನು ಅವರು ನೋಡವಂತೆ ಮಾಡುವುದೇ ನನ್ನ ಮೂಲ ಉದ್ದೇಶ ಎಂದರು.

ವೇದಿಕೆಯಲ್ಲಿ ಮಾಜಿ ಸಚಿವ ಎಚ್ ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಅನೇಕರು ಇದ್ದರು.

ಇದನ್ನೂ ಓದಿ: ಗುಜರಾತಿನವರು ದಕ್ಷಿಣ ಕನ್ನಡದವರ ಬ್ಯಾಂಕುಗಳನ್ನು ನುಂಗಿ ನೀರು ಕುಡಿದರು: ಅಮಿತ್‌ ಶಾಗೆ ಸಿದ್ದರಾಮಯ್ಯ ತಿರುಗೇಟು

Similar News