ಮಂಡ್ಯ: ಕಬ್ಬಿನ ಗದ್ದೆಗೆ ಬಿದ್ದ ಬೆಂಕಿಯನ್ನು ನಂದಿಸಲು ಮುಂದಾದ ರೈತ ಸಜೀವ ದಹನ
Update: 2023-02-13 14:44 GMT
ಮಂಡ್ಯ, ಫೆ.13: ಕಬ್ಬಿನ ಗದ್ದೆಗೆ ಬಿದ್ದ ಬೆಂಕಿಯನ್ನು ನಂದಿಸಲು ಮುಂದಾದ ರೈತ ಜೀವಂತ ದಹನವಾದ ಘಟನೆ ತಾಲೂಕಿನ ಮೊಡಚಾಕನಹಳ್ಳಿ ಗ್ರಾಮದಲ್ಲಿ ರವಿವಾರ ನಡೆದಿದೆ.
ಗ್ರಾಮದ ಮಹಾಲಿಂಗಯ್ಯ (60) ಎಂಬ ರೈತ ಘಟನೆಯಿಂದ ಸಾವನ್ನಪ್ಪಿದ್ದು, ಆಕಸ್ಮಿಕ ಬೆಂಕಿಗೆ ಸುಮಾರು 20 ಎಕರೆ ಪ್ರದೇಶದ ಕಬ್ಬು ಬೆಳೆ ಸುಟ್ಟು ಭಸ್ಮವಾಗಿದೆ.
ಮಹಾಲಿಂಗಯ್ಯ ಜಮೀನಿನ ಬಳಿ ತೆರಳಿದ್ದಾಗ ಕಬ್ಬಿನಗದ್ದೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂದಿಸಲು ಮುಂದಾಗಿದ್ದಾರೆ. ಆದರೆ, ಬೆಂಕಿನ ಕೆನ್ನಾಲಿಗೆ ಸಿಲುಕಿ ಸುಟ್ಟು ಕರಕಲಾದರು ಎಂದು ತಿಳಿದು ಬಂದಿದೆ.
ಮಹೇಶ, ಜವರೇಗೌಡ, ಪಾಪಣ್ಣ ಅವರಿಗೆ ಸೇರಿದ ಕಬ್ಬು ಬಸ್ಮವಾಗಿದ್ದು, ಇದರ ಜತೆ ಮಹೇಶ್ ಅವರ ಒಂದೂವರೆ ಎಕರೆ ಬಾಳೆ ತೋಟವೂ ಬೆಂಕಿಗಾಹುತಿಯಾಗಿದೆ. ಶಾಸಕ ಸಿ.ಎಸ್.ಪುಟ್ಟರಾಜು, ರೈತಸಂಘದ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಸ್ಥಳಕ್ಕೆ ಭೇಟಿ ರೈತರಿಗೆ ಸಾಂತ್ವನ ಹೇಳಿದರು.
ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.