5 ಡಿಸಿಸಿ ಬ್ಯಾಂಕ್‍ಗಳಲ್ಲಿ ಅವ್ಯವಹಾರ ಪತ್ತೆ, ತನಿಖೆ ನಡೆಯುತ್ತಿದೆ: ಸಚಿವ ಎಸ್.ಟಿ.ಸೋಮಶೇಖರ್

Update: 2023-02-14 16:27 GMT

ಬೆಂಗಳೂರು, ಫೆ. 14: ರಾಜ್ಯದ 5 ಡಿಸಿಸಿ ಬ್ಯಾಂಕ್‍ಗಳಲ್ಲಿ ಅವ್ಯವಹಾರಗಳು ಪತ್ತೆಯಾಗಿದ್ದು, ಅವುಗಳ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಮಂಗಳವಾರ ಪರಿಷತ್‍ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಪ್ರಸ್ತಾಪಕ್ಕೆ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿ, ಶಿವಮೊಗ್ಗ ಡಿಸಿಸಿ ಬ್ಯಾಂಕ್‍ನಲ್ಲಿ ಚಿನ್ನ ತೆಗೆದು ಕಬ್ಬಿಣ ಇಟ್ಟಿದ್ದ ಪ್ರಕರಣ ಸೇರಿದಂತೆ ಧಾರವಾಡ, ವಿಜಯಪುರ, ಬೀದರ್ ಮತ್ತು ಕೋಲಾರ ಡಿಸಿಸಿ ಬ್ಯಾಂಕ್‍ಗಳ ವಿವಿಧ ಪ್ರಕರಣಗಳು ತನಿಖೆ ಹಂತದಲ್ಲಿವೆ ಎಂದು ಹೇಳಿದರು. 

ಅಲ್ಲದೆ, 5 ಡಿಸಿಸಿ ಬ್ಯಾಂಕ್‍ಗಳ ಅವ್ಯವಹಾರ ಹಿನ್ನೆಲೆಯಲ್ಲಿ ರಾಜ್ಯದ 21 ಡಿಸಿಸಿ ಬ್ಯಾಂಕ್‍ಗಳಲ್ಲಿ ನಡೆದಿರಬಹುದಾದ ಅಕ್ರಮಗಳ ಪತ್ತೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಬಾರ್ಡ್ ನಿಯಮವನ್ನು ಉಲ್ಲಂಘಿಸಿ ಕೋಲಾರ ಡಿಸಿಸಿ ಬ್ಯಾಂಕ್ ಸ್ವಸಹಾಯ ಸಂಘಗಳಿಂದ ಶೇರು ನಿಧಿ ಸಂಗ್ರಹ ಮಾಡುತ್ತಿದ್ದು, ಅದನ್ನು ಕೂಡಲೇ ನಿಲ್ಲಿಸುವಂತೆ ಬ್ಯಾಂಕ್‍ಗೆ ಸೂಚನೆ ನೀಡಲಾಗಿದೆ. ಜತೆಗೆ ಈ ಸಂಬಂಧ ನೋಟಿಸ್ ಕೂಡಾ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ನಬಾರ್ಡ್ ರಾಜ್ಯದ ವಿವಿಧ ಡಿಸಿಸಿ ಬ್ಯಾಂಕ್‍ಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಪತ್ತೆ ಮಾಡುವುದಿಲ್ಲ. ಬದಲಾಗಿ ಇಲಾಖೆ ಮತ್ತು ಲೆಕ್ಕ ಪರಿಶೋಧಕರು ಅವ್ಯವಹಾರಗಳನ್ನು ಪತ್ತೆ ಮಾಡಿ ಅವುಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

Similar News