ಕೋಮುವಾದಿ ರಾಜಕಾರಣಕ್ಕೆ ಮಂಡ್ಯದ ಜನರು ಅವಕಾಶ ಕೊಡಲ್ಲ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಮಂಡ್ಯ, ಫೆ.17: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಡಾ.ಅಶ್ವತ್ಥ ನಾರಾಯಣ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾವಣೆಗೊಂಡ ನೂರಾರು ಕಾರ್ಯಕರ್ತರು ಧಿಕ್ಕಾರ ಕೂಗಿ, ಅಶ್ವತ್ಥ ನಾರಾಯಣ ಉನ್ನತ ಸಚಿವರಾಗಿರಲು ನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕೂಡಲೇ ಸಚಿವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ, ಸಂಘಪರಿವಾರ ಮೊದಲು ದೇಶದ ಸಂವಿಧಾನ ಓದಬೇಕು. ಹಿಂದುಳಿದ ವರ್ಗದ ವ್ಯಕ್ತಿ ಪ್ರಧಾನಿಯಾಗಲು ಸಂವಿಧಾನವೇ ಕಾರಣ ಎಂಬುದನ್ನು ತಿಳಿಯಬೇಕು. ಇತಿಹಾಸದಲ್ಲೇ ಇಲ್ಲದ ಉರಿಗೌಡ, ನಂಜೇಗೌಡರನ್ನು ಸೃಷ್ಟಿ ಮಾಡಿ ಟಿಪ್ಪು ಸುಲ್ತಾನ್ ಕೊಂದರು ಎನ್ನುವ ಮೂಲಕ ಒಕ್ಕಲಿಗರಿಗೆ ಅವಮಾನ ಮಾಡಲು ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು.
ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಧರ್ಮ ಪ್ರಚೋದನೆ ಮಾಡಿ, ಜಾತಿಗಳನ್ನು ಎತ್ತಿಕಟ್ಟಿ ಚುನಾವಣೆ ನಡೆಸಲು ಬಿಜೆಪಿ ಹೊರಟಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಮಂಡ್ಯದ ಜನರು ಕೋಮುವಾದಿ ರಾಜಕಾರಣಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಮಾತನಾಡಿ, ಆರ್ಎಸ್ಎಸ್ ಹೇಳಿಕೊಟ್ಟಂತೆ ಹೇಳುವ ಮೂಲಕ ಅಶ್ವತ್ಥ ನಾರಾಯಣ ತಪ್ಪು ಮಾಡಿದ್ದಾರೆ. ಕೆ.ವಿ.ಶಂಕರಗೌಡ, ಜಿ.ಮಾದೇಗೌಡ, ಎಸ್.ಎಂ.ಕೃಷ್ಣರಂತಹ ಮುತ್ಸದ್ದಿ ರಾಜಕಾರಣಿಗಳನ್ನು ಕಂಡಿರುವ ಈ ಜಿಲ್ಲೆಯ ಒಕ್ಕಲಿಗ ಸಮುದಾಯ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಎಚ್.ಬಿ.ರಾಮು, ಎಂ.ಎಸ್.ಆತ್ಮಾನಂದ, ನಗರಸಭಾ ಸದಸ್ಯರಾದ ಪೂರ್ಣಿಮಾ, ನಯೀಂ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ, ಯುವ ಅಧ್ಯಕ್ಷ ವಿಜಯಕುಮಾರ್, ಗಣಿಗ ರವಿಕುಮಾರ್, ಡಾ.ಎಚ್.ಕೃಷ್ಣ, ರಾಧಾಕೃಷ್ಣ ಕೀಲಾರ, ಉಮ್ಮಡಹಳ್ಳಿ ಶಿವಪ್ಪ, ಎಂ.ಎಸ್.ಚಿದಂಬರ್, ಜಬೀವುಲ್ಲಾ, ತ್ಯಾಗರಾಜ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.