ಪಕ್ಷದ ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚಿಕೆ ನನ್ನ ವ್ಯಾಪ್ತಿಯಲ್ಲಿ ಇಲ್ಲ: ರಣದೀಪ್ ಸಿಂಗ್ ಸುರ್ಜೇವಾಲಾ

Update: 2023-02-18 17:01 GMT

ವಿಜಯಪುರ: ‘ಪಕ್ಷದ ಅಭ್ಯರ್ಥಿಗಳ ಆಯ್ಕೆ ಮತ್ತು ಟಿಕೆಟ್ ಹಂಚಿಕೆ ನನ್ನ ವ್ಯಾಪ್ತಿಯಲ್ಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಸೇರಿದಂತೆ ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚನೆ ಮಾಡಿದ್ದು, ಆ ಸಮಿತಿ ಒಮ್ಮತ ನಿರ್ಣಯ ಕೈಗೊಳ್ಳಲಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಗರದ 770 ಲಿಂಗದ ಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮುಂಬರಲಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಎಲ್ಲರೊಂದಿಗೆ ಚರ್ಚಿಸಿ ಚುನಾವಣೆಗೆ ಟಿಕೆಟ್ ನೀಡಲಾಗುವುದು ಎಂದು ವಿವರಣೆ ನೀಡಿದರು.

ಕಾಂಗ್ರೆಸ್ ಪಕ್ಷವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಒಂದು ಕಡೆಯಾದರೆ, ಕಾಂಗ್ರೆಸ್ ಮತ್ತು ಕರ್ನಾಟಕದ ಜನತೆ ಒಂದು ಕಡೆಗೆ ಇದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರಾನೇರ ಸ್ಪರ್ಧೆ ಏರ್ಪಟ್ಟಿದ್ದು, ಭ್ರಷ್ಟ ಬಿಜೆಪಿ ಸರಕಾರ ಕಿತ್ತೊಗೆಯಲು ಜನತೆ ಸಜ್ಜಾಗಿದ್ದಾರೆ ಎಂದು ಹೇಳಿದರು.

ಡಾ.ಪರಮೇಶ್ವರ್ ನಮ್ಮ ಪಕ್ಷದ ಹಿರಿಯರು. ಮುಂಬರಲಿರುವ ಚುನಾವಣೆಯ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಪಕ್ಷದಲ್ಲಿ ಅಧಿಕಾರಕ್ಕಾಗಿ ಯಾರೂ ಜಗಳ ನಡೆಸುತ್ತಿಲ್ಲ ಎಂದ ಅವರು, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್, ಪ್ರತಿಯೊಬ್ಬ ಮಹಿಳೆಯರಿಗೆ 2 ಸಾವಿರ ರೂ.ಮಾಸಾಶನ ನೀಡುವುದು ಎಂದು ಈಗಾಗಲೇ ಪಕ್ಷದಿಂದ ಘೋಷಣೆ ಮಾಡಲಾಗಿದೆ ಎಂದರು.

ಪರಶಿವನ ಹೇಳಿಕೆಯಂತೆ ಕೆಟ್ಟ ವಿಚಾರಗಳು ತಲೆಯನ್ನು ಮೀರಿ ಬೆಳೆದರೆ ಅದರ ಅಂತ್ಯ ಮಾಡಬೇಕು. ಈಗ ಕಲಿಯುಗದಲ್ಲಿ ಮತ ಹಾಕುವ ಮೂಲಕ ಅದಕ್ಕೆ ಮತದಾರರು ಅಂತ್ಯ ಹಾಡಬೇಕು. ಯಾವುದೇ ಜಾತಿ ಮತ್ತು ಪಂಥಗಳ ಜನರು ಮತದಾನ ಮಾಡುವ ಮೂಲಕ ರಾಜ್ಯದ ಕೆಟ್ಟ ಬಿಜೆಪಿ ಸರಕಾರವನ್ನು ತೊಲಗಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಅವರು ಕೋರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಆಲಗೂರ, ಸೋಮನಾಥ ಕಳ್ಳಿಮನಿ, ಶರಣಪ್ಪ ಸುಣಗಾರ, ಶ್ರೀನಾಥ ಪೂಜಾರಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Similar News