ಹಾವೇರಿ | 2 ಗುಂಪುಗಳ ನಡುವೆ ಘರ್ಷಣೆ: ಎಂಟು ಮಂದಿಗೆ ಚೂರಿಯಿಂದ ಇರಿದ ಯುವಕ
ಹಾವೇರಿ, ಫೆ.19: ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿದ್ದು, ಈ ವೇಳೆ ಯುವಕನೋರ್ವ ಚಾಕುವಿನಿಂದ ಇರಿದು ಎಂಟು ಮಂದಿಯನ್ನು ಗಾಯಗೊಳಿಸಿದ ಘಟನೆ ಶಿಗ್ಗಾಂವಿ ತಾಲೂಕಿನ ಕಮಲಾ ನಗರ (ತಡಸ ತಾಂಡಾ)ದಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ.
ಸುರೇಶ ಲಮಾಣಿ ಚಾಕುವಿನಿಂದ ಇರಿದ ಆರೋಪಿಯಾಗಿದ್ದಾನೆ. ರವಿ ಲಾಮಣಿ, ಶಂಕರ್ ಲಮಾಣಿ, ರಾಜು ಲಮಾಣಿ, ಮಹೇಶ ಲಮಾಣಿ, ಲಾಲಪ್ಪ ಲಮಾಣಿ, ಹನುಮಂತ ಪೂಜಾರಿ ಹಾಗೂ ಅಕ್ಷಯ ಲಾಮಣಿ ಸಹಿತ ಎಂಟು ಮಂದಿ ಹಲ್ಲೆಗೊಳಗಾದವರು. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಅದೇ ಗ್ರಾಮದ ಸುರೇಶ ಲಮಾಣಿ, ರಾಜು ಲಮಾಣಿ, ಲಕ್ಷ್ಮಣ ಲಮಾಣಿ, ಅಶೋಕ ಲಮಾಣಿ, ಪ್ರವೀಣ ಲಾಮಣಿ, ರವಿ ಹನುಮಂತ ಎಂಬವರು ಸೇರಿ ಹಲ್ಲೆ ನಡೆಸಿದ್ದು, ಈ ಪೈಕಿ ಸುರೇಶ ಲಮಾಣಿ ಚಾಕುವಿನಿಂದ ಯದ್ವಾತದ್ವ ಇರಿದಿದ್ದಾಗಿ ಆರೋಪಿಸಲಾಗಿದೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.