×
Ad

ಮ್ಯಾನ್‍ಹೋಲ್ ಶುಚಿಗೊಳಿಸುವಾಗ ಪತಿ ಸಾವು: ಪತ್ನಿಗೆ ನೀಡಿದ್ದ ನಿವೇಶನ ಹಿಂಪಡೆದ ಗ್ರಾ.ಪಂ. ಗೆ 1 ಲಕ್ಷ ರೂ. ದಂಡ

Update: 2023-02-19 18:25 IST

ಬೆಂಗಳೂರು: ಮ್ಯಾನ್‍ಹೋಲ್ ಶುಚಿಗೊಳಿಸುವಾಗ ಕಾರ್ಮಿಕನೊಬ್ಬ ಸಾವನ್ನಪ್ಪಿದ ಪ್ರಕರಣದಲ್ಲಿ ಮೃತನ ಪತ್ನಿಗೆ ನೀಡಿದ್ದ ನಿವೇಶನ ಹಿಂಪಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, 1 ಲಕ್ಷ ರೂ.ದಂಡ ವಿಧಿಸಿದೆ. 

ಮೃತ ಕಾರ್ಮಿಕ ನರಸಿಂಹಯ್ಯನ ಪತ್ನಿ ನಾಗಮ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಮೃತರ ಪತ್ನಿಗೆ ಮನೆ ಸಹಿತ ನಿವೇಶನ ಮರು ಮಂಜೂರು ಮಾಡುವಂತೆ ಸೂಚನೆ ನೀಡಿದೆ.

ಅರ್ಜಿದಾರರಿಗೆ ಕಟ್ಟಿದ ಮನೆಯನ್ನೇ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಜತೆಗೆ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂವರು ಸೇರಿ 50ಸಾವಿರ ರೂ. ಮತ್ತು ಗ್ರಾಮ ಪಂಚಾಯಿತಿ 50 ಸಾವಿರ ರೂ.ಸೇರಿಸಿ 1 ಲಕ್ಷ ರೂ. ಗಳನ್ನು ಅರ್ಜಿದಾರರಾರಿಗೆ ನೀಡಬೇಕು ಎಂದು ನ್ಯಾಯಾಲಯ ನಿರ್ದೆಶನ ನೀಡಿದೆ.

ನಿವೇಶನದಲ್ಲಿ ಮನೆ ಕಟ್ಟಿಲ್ಲವೆಂದು ಹಂಚಿಕೆ ರದ್ದು ಪಡಿಸಿದ್ದ ಗ್ರಾಮ ಪಂಚಾಯಿತಿ ಕ್ರಮಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿ, ಬಿಡಬ್ಲು ಎಸ್‍ಎಸ್‍ಬಿ ನಿರ್ಲಕ್ಷ್ಯದಿಂದ ನರಸಿಂಹಯ್ಯ ಸಾವನ್ನಪ್ಪಿದ್ದಾರೆ. ಆದರೆ ಅವರಿಗೆ ನೀಡಿರುವ ನಿವೇಶನ ರದ್ದು ಮಾಡಿರುವ ಬಗ್ಗೆ ಗ್ರಾ. ಪಂ ಧೋರಣೆ ನ್ಯಾಯಸಮ್ಮತವಲ್ಲ ಎಂದು ತಿಳಿಸಿದೆ.

ಪ್ರಕರಣವೇನು: ನರಸಿಂಹಯ್ಯ 2008ರಲ್ಲಿ ಮೃತಪಟ್ಟ ನಂತರ ಹೈಕೋರ್ಟ್ ನಿರ್ದೇಶನದಂತೆ ಅವರ ಪತ್ನಿ ನಾಗಮ್ಮಗೆ 2012ರಲ್ಲಿ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1,200 ಚದರ ಅಡಿಯ ನಿವೇಶನವನ್ನು ಮಂಜೂರು ಮಾಡಿತ್ತು. ಆದರೆ ಅವರು ಮನೆ ಕಟ್ಟಲಿಲ್ಲ ಎಂಬ ಕಾರಣಕ್ಕೆ ಅವರಿಗೆ ನೀಡಿದ್ದ ನಿವೇಶವನ್ನು ಗ್ರಾಮ ಪಂಚಾಯಿತಿ ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.  

Similar News