ಲಾಕಪ್ ಡೆತ್ ಪ್ರಕರಣ: ತೆಲಂಗಾಣದ ನಾಲ್ವರು ಪೊಲೀಸರ ಅಮಾನತು
ಹೈದರಾಬಾದ್: ಕಿರುಕುಳ ನೀಡಿ ವ್ಯಕ್ತಿಯೊಬ್ಬನ ಲಾಕಪ್ ಡೆತ್ಗೆ ಕಾರಣವಾಗಿದ್ದಾರೆ ಎಂಬ ಆರೋಪದಲ್ಲಿ ತೆಲಂಗಾಣದ ಮೇಡಕ್ ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮೇಡಕ್ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಮಧು, ಸಬ್ ಇನ್ಸ್ಪೆಕ್ಟರ್ ರಾಜಶೇಖರ್, ಕಾನ್ಸ್ಟೇಬಲ್ಗಳಾದ ಪ್ರಶಾಂತ್ ಹಾಗೂ ಪವನ್ ಕುಮಾರ್ ಅಮಾನತಿಗೆ ಒಳಗಾಗಿರುವ ಪೊಲೀಸ್ ಅಧಿಕಾರಿಗಳು ಎಂದು ಮೇಡಕ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಪ್ರಿಯದರ್ಶಿನಿ ತಿಳಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಘಟನೆಯ ಕುರಿತು ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಲು ಪೊಲೀಸ್ ಮಹಾ ನಿರೀಕ್ಷಕ ಅಂಜನಿ ಕುಮಾರ್ ಆದೇಶಿಸಿದ ಬೆನ್ನಿಗೇ ಪೊಲೀಸ್ ಮಹಾ ನಿರ್ದೇಶಕ ಚಂದ್ರಶೇಖರ್ ರೆಡ್ಡಿ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶಿಸಿದ್ದಾರೆ.
ಕಮ್ಮಾರೆಡ್ಡಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯಿಂದ ಘಟನೆಯ ಕುರಿತು ತನಿಖೆ ನಡೆಸಿ, ತನಿಖೆಯ ಮೇಲುಸ್ತುವಾರಿ ವಹಿಸುವಂತೆ ಪೊಲೀಸ್ ಮಹಾ ನಿರೀಕ್ಷಕರಿಗೆ ಪೊಲೀಸ್ ಮಹಾ ನಿರ್ದೇಶಕರು ಸೂಚಿಸಿದ್ದಾರೆ. ಇದಲ್ಲದೆ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕರು ಪ್ರಕಟಿಸಿದ್ದಾರೆ.