ಮಡಿಕೇರಿ| ಕಂದಕಕ್ಕೆ ಉರುಳಿದ ಬಸ್: 40 ಮಂದಿಗೆ ಗಾಯ

Update: 2023-02-21 06:15 GMT

ಮಡಿಕೇರಿ, ಫೆ.21: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಸಾರ್ಟಿಸಿ ಬಸ್ ವೊಂದು ಕಂದಕಕ್ಕೆ ಉರುಳಿ ಬಿದ್ದು 40 ಮಂದಿ ಗಾಯಗೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯ ಕಾವಾಡಿಯಲ್ಲಿ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ.

ಹಾಸನ ಡಿಪೋಗೆ ಸೇರಿದ ಬಸ್ ಕೇರಳ ರಾಜ್ಯದ ಎರ್ನಾಕುಲಂ ನಿಂದ ಕೊಡಗಿನ ವಿರಾಜಪೇಟೆ ಮೂಲಕ ಹಾಸನಕ್ಕೆ ತೆರಳುತ್ತಿತ್ತು. ಇಂದು ಮುಂಜಾನೆ 4.30 ಗಂಟೆಯ ಸುಮಾರಿನಲ್ಲಿ ಬಸ್ ಕಂದಕಕ್ಕೆ ಉರುಳಿದೆ. ಚಾಲಕ ಸೇರಿದಂತೆ 40 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ದಟ್ಟ ಮಂಜು ಕವಿದಿದ್ದ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಸ್ ನ್ನು ಮೇಲೆತ್ತುವ ಕಾರ್ಯಾಚರಣೆ ಆರಂಭಗೊಂಡಿದೆ. 

Similar News