ತೂತುಕುಡಿ ತಾಮ್ರ ಘಟಕ | ಜೀವದ ಪ್ರಶ್ನೆ ಬಿಟ್ಟು, ಜೀವನೋಪಾಯದ ಪ್ರಶ್ನೆ ಮುಂದಿಟ್ಟು ಪುನರಾರಂಭದ ಹುನ್ನಾರ

Update: 2023-02-21 06:58 GMT

ಜನರ ಆರೋಗ್ಯ ಮತ್ತು ಸುತ್ತಲಿನ ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಉಂಟುಮಾಡಿದ್ದ ತೂತುಕುಡಿ ತಾಮ್ರ ಘಟಕ ಮತ್ತೆ ಶುರುವಾಗಬೇಕೆಂದು ಬಯಸುತ್ತಿರುವವರು ಯಾರು? ಅವರನ್ನು ಬೆಂಬಲಿಸುತ್ತಿರುವವರು ಯಾರು? ಕಾರ್ಖಾನೆ ಬೇಕೆನ್ನುವವರು ಮತ್ತು ಬೇಡವೆನ್ನುವವರ ವಾದಗಳೇನು?

ತೂತುಕುಡಿ ಸ್ಟೆರ್ಲೈಟ್ ತಾಮ್ರ ಘಟಕ. ಸುಮಾರು 30 ವರ್ಷಗಳ ಹಿಂದೆ ತಮಿಳುನಾಡಿನ ಲಕ್ಷಾಂತರ ಜನರ ಪಾಲಿಗೆ ಉದ್ಯೋಗದ ಆಸೆ ಹುಟ್ಟಿಸಿ ಒಳಬಂದ ವೇದಾಂತ ಸಮೂಹದ ಈ ಕಾರ್ಖಾನೆ, ಆಮೇಲೆ ಜನರ ಪ್ರಾಣಕ್ಕೇ ಎರವಾಗುವಂಥ ವಿಷಕಾರಿ ಅನಿಲ ಸೋರಿಕೆಗೆ ಕಾರಣವಾಗಿತ್ತು. ಕಡೆಗೆ 2018ರ ಮೇ ತಿಂಗಳಲ್ಲಿ ಅದರ ವಿರುದ್ಧ ತೀವ್ರಗೊಂಡ ಪ್ರತಿ‘ಟನೆ ವೇಳೆ ಪೊಲೀಸರು ಗೋಲಿಬಾರ್ ಮಾಡಿದ ಪರಿಣಾಮ 13 ಮಂದಿಯ ಪ್ರಾಣ ಹೋಗಿತ್ತು. ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕಳೆದ 5 ವರ್ಷಗಳಿಂದ ಮುಚ್ಚಿದ್ದ ತಾಮ್ರ ಘಟಕ ಮತ್ತೆ ಆರಂಭಿಸಬೇಕೆಂಬ ಒತ್ತಾಯಗಳು ಈಗ ವ್ಯಕ್ತವಾಗತೊಡಗಿವೆ. ಇಂಗ್ಲಿಷ್ ಪತ್ರಿಕೆಗಳಲ್ಲಿ ಫೆ.17ರಂದು ಪ್ರಕಟವಾಗಿರುವ ಪೂರ್ಣ ಪುಟದ ನಿಗೂಢ ಜಾಹೀರಾತುಗಳು ಅದಕ್ಕೊಂದು ವೇದಿಕೆಯೆಂಬಂತೆ ಕಾಣಿಸತೊಡಗಿವೆ.  

2022ರ ಮಧ್ಯದಲ್ಲಿ ಸ್ಥಾವರ ಮಾರಾಟಕ್ಕೆ ಯೋಚಿಸಿದ್ದ ವೇದಾಂತ ಸಮೂಹ ಈಚೆಗೆ ಸ್ಥಾವರ ಮಾರಾಟದ ಪ್ರಸ್ತಾವವನ್ನು ಕೈಬಿಟ್ಟಿರುವ ಬಗ್ಗೆ ವರದಿಗಳಿದ್ದವು. ಅದರ ಬೆನ್ನಲ್ಲೇ ಈಗ ಟೈಮ್ಸ್ ಆಫ್ ಇಂಡಿಯಾದಂತಹ ಪ್ರತಿಷ್ಠಿತ ಪತ್ರಿಕೆಯಲ್ಲಿ ದೊಡ್ಡ ಮೊತ್ತದ ಇಂಥದೊಂದು ವಿಚಿತ್ರ ಪೂರ್ಣ ಪುಟದ ಜಾಹೀರಾತು, ತಾಮ್ರ ಘಟಕ ವಿರೋಧಿಗಳ ಹುಬ್ಬೇರುವಂತೆ ಮಾಡಿದೆ.

ಏನಿದೆ ಈ ಜಾಹೀರಾತಿನಲ್ಲಿ?

‘ನಮ್ಮ ಭವಿಷ್ಯ ಉಳಿಸಿ, ನಮ್ಮ ಜೀವನೋಪಾಯವನ್ನು ಮರಳಿ ನೀಡಿ’ ಎಂಬ ಶೀರ್ಷಿಕೆಯ ಈ ಜಾಹೀರಾತಿನಲ್ಲಿ ಇರುವ ಅಂಶಗಳು ಹೀಗಿವೆ:

  •  ತಾಮ್ರ ಕಾರ್ಖಾನೆ 22 ವರ್ಷ ತೂತುಕುಡಿಯಲ್ಲಿ ಅನೇಕ ಜನರ ಜೀವನಾಧಾರವಾಗಿತ್ತು.
  •  5 ವರ್ಷಗಳ ಹಿಂದೆ ಅದನ್ನು ಮುಚ್ಚಲಾಯಿತು.
  •  ಲಕ್ಷಾಂತರ ಜನರು ಉದ್ಯೋಗವಿಲ್ಲದೆ ಬಳಲುತ್ತಿದ್ದಾರೆ.
  •  ಇದು ಪರಿಸರದ ದೃಷ್ಟಿಯಿಂದ ಪಾಲಿಸುವ ಕ್ರಮಗಳನ್ನು ಎನ್ಜಿಟಿ ದೃಢಪಡಿಸಿದೆ.
  •  ನೂರಾರು ವಿಚಾರಣೆಗಳು ಆಗಿವೆ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜೀವಗಳ ರಕ್ಷಣೆಗಾಗಿ ಸ್ಥಾವರ ಆಮ್ಲಜನಕ ಉತ್ಪಾದಿಸಿತ್ತು.
  •  ಹಲವಾರು ಸಣ್ಣ ಉದ್ಯಮಗಳಿಗೆ ಸ್ಥಾವರ ಅವಕಾಶ ನೀಡಿತ್ತು.
  •  ಸ್ಥಾವರ ಮುಚ್ಚಿದ್ದರಿಂದಾಗಿ ಸರಕಾರವು ಭಾರೀ ನಷ್ಟ ಅನುಭವಿಸಿದೆ

ಗಮನಿಸಬೇಕಾದ ಒಂದು ಸಂಗತಿಯೆಂದರೆ, ಸ್ಟೆರ್ಲೈಟ್ ತಾಮ್ರ ಸ್ಥಾವರ ಎಂದು ನೇರವಾಗಿ ಹೆಸರಿಸದೆ ತಾಮ್ರ ಘಟಕ ಎಂದು ಮಾತ್ರ ಜಾಹೀರಾತಿನಲ್ಲಿ ಹೇಳಲಾಗಿದೆ. 
ಹಾಗಾದರೆ, ಜನರ ಜೀವನೋಪಾಯದ ಪ್ರಶ್ನೆ ಮುಂದಿಟ್ಟು, ವಿವಾದಿತ ತಾಮ್ರ ಘಟಕ ಮರು ಆರಂಭದ ಯತ್ನವೊಂದು ನಡೆದಿದೆಯೇ? ಯಾರು ಈ ಜಾಹೀರಾತು ಪ್ರಕಟಿಸಿರುವವರು?
ತೂತುಕುಡಿ ಕೈಗಾರಿಕಾ ಪೂರೈಕೆದಾರರ ಸಂಘ, ತೂತುಕುಡಿ ಗುತ್ತಿಗೆದಾರರ ಸಂಘ, ತೂತುಕುಡಿ ಮಕ್ಕಳ್ ವಾಳ್ವಾಧಾರ ಪಧುಕಪ್ಪು ಸಂಗಮ್ ಮತ್ತು ಮನುನೀತಿ ಫೌಂಡೇಶನ್ ಎಂಬ ಸಂಘಟನೆಗಳು ಬೆಂಬಲಿಸಿರುವ ಜಾಹೀರಾತು ಇದಾಗಿದೆ. ಕೋವಿಡ್ ಸಮಯದಲ್ಲಿ ಆಮ್ಲಜನಕ ಉತ್ಪಾದಿಸಿ, ಸಾವಿರಾರು ಜನರ ಪ್ರಾಣ ಉಳಿಸಲು ಘಟಕ ನೆರವಾಗಿತ್ತೆಂಬುದನ್ನು ಜಾಹೀರಾತಿನಲ್ಲಿ ನೆನಪಿಸಲಾಗಿದೆ. ಮಾತ್ರವಲ್ಲದೆ, ಯಾವ ಕಾರಣಕ್ಕಾಗಿ ಘಟಕ ಜನರ ವಿರೋಧವನ್ನು ಎದುರಿಸಿತ್ತೊ, ಅದಕ್ಕೆ ಉತ್ತರವೆಂಬಂತೆ ಎನ್ಜಿಟಿಯೇ ಸ್ಥಾವರದ ಪರ ತೀರ್ಪು ನೀಡಿದ್ದನ್ನು ಉಲ್ಲೇಖಿಸಲಾಗಿದೆ.

ಸ್ಥಾವರದ ಪುನರಾರಂಭದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ದೊಡ್ಡ ಮಟ್ಟದಲ್ಲಿಯೇ ಇರುವ ಹೊತ್ತಿನಲ್ಲಿ ಇಂಥದೊಂದು ಜಾಹೀರಾತು ಬಂದಿರುವುದು, ಕಾರ್ಪೊರೇಟ್ ವಲಯದ ಜಾಣ ರಾಜಕಾರಣದ ಭಾಗವೇ ಎಂಬ ಅನುಮಾನ ಮೂಡದೇ ಇರುವುದಿಲ್ಲ. ಸ್ಥಾವರ ಪುನರಾರಂಭವನ್ನು ವಿರೋಧಿಸುವ ಗುಂಪು ಇರುವ ಹಾಗೆಯೇ, ಅದನ್ನು ಆರಂಭಿಸುವುದರ ಪರವಾದ ಕಾರ್ಪೊರೇಟ್ ಗುಂಪೊಂದು ಸಕ್ರಿಯ ಪ್ರಯತ್ನದಲ್ಲಿರುವುದಂತೂ ನಿಜ.

ಈ ಸ್ಥಾವರದ ಪರವಾಗಿರುವವರು ಅದರ ಕೊಡುಗೆಗಳನ್ನು ಮುಖ್ಯವೆಂದು ಬಿಂಬಿಸುವ ಯತ್ನ ಮಾಡುತ್ತಲೇ ಇದ್ದಾರೆ. ದೇಶದಲ್ಲಿ ಉತ್ಪಾದನೆಯಾಗುವ ತಾಮ್ರದ ಪೈಕಿ ಶೇ. 40ರಷ್ಟು ಪಾಲು ಸ್ಟೆರ್ಲೈಟ್ ಕಾಪರ್ನದ್ದೇ ಆಗಿತ್ತು. ಭಾರತದಲ್ಲಿರುವ ಮೂರು ಪ್ರಮುಖ ತಾಮ್ರ ಉತ್ಪಾದಕ ಕಂಪೆನಿಗಳಲ್ಲಿ ಇದೂ ಒಂದು. ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಸಂಸ್ಥೆಯ ಬಳಿಕ ಅತಿ ಹೆಚ್ಚು ತಾಮ್ರ ಉತ್ಪಾದನೆ ಮಾಡುವ ಭಾರತೀಯ ಕಂಪೆನಿ ವೇದಾಂತ ಕಂಪೆನಿಯ ಸ್ಟೆರ್ಲೈಟ್ ಕಾಪರ್ ಆಗಿದೆ ಎಂದು ಹೇಳಲಾಗುತ್ತದೆ. ಈ ಘಟಕ ಬಂದ್ ಆಗಿದ್ದರಿಂದ ಭಾರತದ ತಾಮ್ರೋದ್ಯಮಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ಥಾವರ ಲಕ್ಷಾಂತರ ಉದ್ಯೋಗಗಳನ್ನು ಒದಗಿಸಿತ್ತೆಂಬುದನ್ನು ಪ್ರಸ್ತಾಪಿಸಲಾಗುತ್ತದೆ. ಇವೆಲ್ಲವೂ ನಿಜ ಕೂಡ. ತಾಮ್ರ ರ್ತು ಮಾಡುತ್ತಿದ್ದ ಭಾರತ ಈ ಘಟಕ ಬಂದ್ ಆದ ಮೇಲೆ ತಾಮ್ರ ಆಮದು ಮಾಡುವ ಹಂತಕ್ಕೆ ಬಂದಿತ್ತು. 

ಆದರೆ, ಅದೇ ಘಟಕ ಹೇಗೆ ಜನರ ಆರೋಗ್ಯ ಮತ್ತು ಪರಿಸರದ ಮೇಲೆ ತೀವ್ರ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಿತು, ಹೇಗೆ ಸುತ್ತಲಿನ ಕೆರೆಗಳಲ್ಲಿ ವಿಷಕಾರಿ ತ್ಯಾಜ್ಯಗಳನ್ನು ಹರಿಯಬಿಟ್ಟಿತ್ತು, ಹೇಗೆ ಆ ಘಟಕದಿಂದಾಗಿ ಅಲ್ಲಿನ ಅಂತರ್ಜಲ ಕಲುಷಿತಗೊಂಡಿತ್ತು, ಹೇಗೆ ಅಲ್ಲಿನ ಗಾಳಿಗೆ ವಿಷಕಾರಿ ಅಂಶಗಳನ್ನು ಸೇರಿಸಿತ್ತು ಎಂಬ ಯಾವ ಸಂಗತಿಗಳನ್ನೂ ಅದರ ಬೆಂಬಲಿಗರು ಹೇಳುವುದಿಲ್ಲ. 2013ರ ಒಂದೇ ವರ್ಷದಲ್ಲಿ ಈ ಘಟಕದಲ್ಲಿ ಅನಿಲ ಸೋರಿಕೆಯಾದ  84 ಘಟನೆಗಳು ನಡೆದಿದ್ದವು ಎಂದು ತಮಿಳು ನಾಡು ಸರಕಾರವೇ  ಹೈಕೋರ್ಟ್ ಗೆ ಮಾಹಿತಿ ನೀಡಿತ್ತು. 2018ರ ಜೂನ್ ನಲ್ಲಿ 50 ಸಾವಿರ ಲೀಟರ್ ಸಲ್ಫ್ಯೂರಿಕ್ ಆ್ಯಸಿಡ್ ಕಾರ್ಖಾನೆಯಿಂದ ಸೋರಿಕೆಯಾಗಿ ಆತಂಕ ಸೃಷ್ಟಿಯಾಗಿದೆ ಎಂದು ವರದಿಯಾಗಿತ್ತು. ಬಳಿಕ ಅದು ‘ಸಣ್ಣ ಸೋರಿಕೆ’ ಎಂದು ಹೇಳಲಾಯಿತು. ಜೀವಪರವಾದ ವಿಚಾರಗಳನ್ನು ಬೇಕೆಂತಲೇ ಮರೆಮಾಚುತ್ತ, ಜನರ ಜೀವನೋಪಾಯದ ಆಮಿಷವನ್ನು ಮತ್ತೊಮ್ಮೆ ಒಡ್ಡುತ್ತ, ಕಾರ್ಖಾನೆ ಮರು ಆರಂ‘ಕ್ಕೆ ಅವಕಾಶ ಗಿಟ್ಟಿಸಲು ಯತ್ನಿಸಲಾಗುತ್ತಿದೆ.  

ತೂತುಕುಡಿಯಲ್ಲಿ ನಡೆದ ಪೊಲೀಸ್  ಫೈರಿಂಗ್ ಮತ್ತು ನಂತರದ ಗಲಭೆಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಸನ್ ಆಯೋಗ ತನಿಖೆ ನಡೆಸಿತ್ತು. ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಯೋಗ ತಮಿಳುನಾಡು ಸರಕಾರಕ್ಕೆ ಶಿಾರಸು ಮಾಡಿತ್ತಾದರೂ, ಆಯೋಗದ ಶಿಾರಸುಗಳನ್ನು ಸರಕಾರ ಪೂರ್ಣವಾಗಿ ಜಾರಿಗೊಳಿಸಿಲ್ಲ ಎಂಬ ಆರೋಪಗಳಿವೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿನ್ನೂ ನ್ಯಾಯಕ್ಕಾಗಿ ಎದುರು ನೋಡುತ್ತಲೇ ಇವೆ.
ಇಂಥ ಸ್ಥಿತಿಯಿರುವಾಗಲೇ ತಾಮ್ರ ಕಾರ್ಖಾನೆ ಮರು ಆರಂ‘ದ ಹುನ್ನಾರವೊಂದು ಅದೇ ಜನರ ಜೀವನೋಪಾಯದ ಹೆಸರಿನಲ್ಲಿ ನಡೆದಿರುವುದು ವಿಪರ್ಯಾಸ.

Full View