ಸಿದ್ದರಾಮಯ್ಯ ಈ ರಾಜ್ಯದ ದೊಡ್ಡ ಆಸ್ತಿ: ಡಿ.ಕೆ ಶಿವಕುಮಾರ್
ಹನೂರು (ಚಾಮರಾಜನಗರ) 'ಸಿದ್ದರಾಮಯ್ಯ ರಾಜ್ಯ ಮುಖ್ಯಮಂತ್ರಿಯಾಗಿದ್ದವರು, ಈಗ ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರು ಈ ರಾಜ್ಯದ ದೊಡ್ಡ ಆಸ್ತಿ. ಅಂತಹವರನ್ನು ಕೊಲೆ ಮಾಡಿ ಎಂದು ಸಚಿವರೊಬ್ಬರು ಹೇಳಿಕೆ ಕೊಟ್ಟರೂ ಸರ್ಕಾರ, ಗೃಹಸಚಿವರು, ಮುಖ್ಯಮಂತ್ರಿ ಇನ್ನೂ ಯಾವುದೇ ಕ್ರಮ ತೆಗೆದುಕೊಳ್ಳದೆ ಏನು ಮಾಡುತ್ತಿದ್ದಾರೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹನೂರು ಪಟ್ಟಣದ ಆರ್.ಎಸ್.ದೊಡ್ಡಿಯ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.
'ಅಧಿವೇಶನದಲ್ಲಿ ಸಚಿವರು ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮಾಪಣೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಇದು ಕ್ಷಮೆಯ ವಿಚಾರವಲ್ಲ. ಇದೊಂದು ಪ್ರಚೋದನಕಾರಿ ಹೇಳಿಕೆ. ಇಂತಹ ಹೇಳಿಕೆ ಯಾರೇ ನೀಡಿದ್ದರೂ ಅದು ತಪ್ಪು. ಈ ದೇಶದ ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಗಳು, ಗೃಹಸಚಿವರು ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದ ಹೆಸರಿಗೆ ಕಪ್ಪುಚುಕ್ಕೆ ಬರುವ ರೀತಿಯಲ್ಲಿ ಆಡಳಿತ ನೀಡಿದ್ದಾರೆ. ಇದೇ ಮಾತನ್ನು ಅವರ ವಿರುದ್ಧ ಮಾತನಾಡಿದ್ದರೆ ಸುಮ್ಮನೆ ಬಿಡುತ್ತಿದ್ದರಾ? ಪೇಸಿಎಂ ಎಂಬ ಪ್ಟೋಸ್ಟರ್ ಅಂಟಿಸಿದ್ದಕ್ಕೆ ನಮ್ಮ ವಿರುದ್ಧ ಕೇಸ್ ದಾಖಲಿಸಿದರು. ನಮ್ಮ ಕಾರ್ಯಕರ್ತರು ಹೋರಾಟ ಮಾಡಿದರೆ ಅವರನ್ನು ಬಂಧಿಸಿ ಕೇಸ್ ಹಾಕಿದರು. ಮಾಜಿ ಮುಖ್ಯಮಂತ್ರಿಯನ್ನು ಹೊಡೆದುಹಾಕಿ ಎಂದು ಹೇಳಿದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ' ಎಂದು ಪ್ರಶ್ನಿಸಿದರು.
'ಕಾಂಗ್ರೆಸ್ ಸೂಜಿಯ ಹಾಗೆ ಜೋಡಿಸುವ ಕೆಲಸ ಮಾಡುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 250 ಯೂನಿಟ್ ಉಚಿತ ವಿದ್ಯುತ್, ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 2 ಸಾವಿರ ಸಹಾಯಧನ ನೀಡಲಾಗುವುದು' ಎಂದು ತಿಳಿಸಿದರು.
'ಪ್ರಜಾಧ್ವನಿ ಸಮಾವೇಶವು ಒಂದು ಐತಿಹಾಸಿಕ ಸಮಾವೇಶವಾಗಿದೆ ನಾನು ದಿ.ರಾಜೂಗೌಡರ ಜೊತೆ ಕೆಲಸ ಮಾಡಿದ್ದೇನೆ. ಶಾಸಕರಾಗಿ ಆರ್.ನರೇಂದ್ರ, ಸಂಸದರಾಗಿ ಆರ್.ಧ್ರುವನಾರಾಯಣ ಅವರು 200 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಅದೆಲ್ಲ ಸಿದ್ದರಾಮಯ್ಯ ಅವರ ಕಾಲದಲ್ಲಿ ಆಗಿದ್ದು' ಎಂದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಎ.ಆರ್ ಕೃಷ್ಣಮೂರ್ತಿ, ಎಸ್.ಬಾಲರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜು, ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ಲತಾ, ಜಿಲ್ಲಾ ಪ್ರಚಾರ ಸಮಿತಿ ರಾಜ್ಯಸಭಾ ಸದಸ್ಯ ಬಿ.ಸಿ.ಚಂದ್ರಶೇಖರ್, ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಚಾಮುಲ್ ನಿರ್ದೇಶಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ನಟ ಸಾಧುಕೋಕಿಲ, ಯುವ ರಂಗಸ್ವಾಮಿ, ಮಹದೇವಶೆಟ್ಟಿ, ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಕೇರಳ ರಾಜ್ಯದ ಶಾಸಕ ಮುಕುಂದವರ್ಮ ಸೇರಿದಂತೆ ಇತರರಿದ್ದರು.