ಬೊಮ್ಮಾಯಿ ನೇತೃತ್ವದ ಸರ್ಕಾರ ಎಲ್ಲವನ್ನೂ ಮಾರಟಕ್ಕಿಟ್ಟಿದೆ: ರಣದೀಪ್ ಸಿಂಗ್ ಸುರ್ಜೇವಾಲಾ

''JDS ಮೋದಿ ಮುಖವಾಡ ಹೊಂದಿದೆ...''

Update: 2023-02-21 16:07 GMT

ಮೈಸೂರು,ಫೆ.21: ರಾಜ್ಯದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲವನ್ನೂ ಮಾರಾಟಕ್ಕಿಟ್ಟಿದೆ ಎಂದು ಎಐಸಿಸಿಸ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಗಂಭೀರ ಆರೋಪ ಮಾಡಿದರು.

ನಗರ ಹಾಗೂ ಜಿಲ್ಲಾ ಕಾಂಗ್ರೆಸ್‍ನಿಂದ ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜಗಜ್ಯೋತಿ ಮತ್ತು ಗೃಹ ಲಕ್ಷ್ಮಿ ಗ್ಯಾರೆಂಟಿ ಯೋಜನೆಯ ಕಾರ್ಡ್‍ಗಳನ್ನು ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಯಾರನ್ನಾದರೂ ಕೇಳಿದರೆ ಬೊಮ್ಮಾಯಿ ಸರ್ಕಾರದ ಶೇ.40 ಕಮಿಷನ್ ಬಗ್ಗೆ ಮಾತನಾಡುತ್ತಿದ್ದಾರೆ. ಬೇರೆ ರಾಜ್ಯದಲ್ಲೂ 'ಪೇ ಸಿಎಂ' ಎಂದು ಬೋರ್ಡ್‍ಗಳನ್ನು ತೋರಿಸುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗಳಿಗೆ ಪತ್ರವನ್ನು ಬರೆದಿದ್ದಾರೆ. ಪ್ರಧಾನಿ ರಾಜ್ಯಕ್ಕೆ 8 ಬಾರಿ ಬಂದರೂ ಈ ಬಗ್ಗೆ ಮಾತನಾಡಿಲ್ಲ. ಗದಗದಲ್ಲಿ ಲಿಂಗಾಯತ ಸ್ವಾಮೀಜಿ ಮಠಗಳು ಅನುದಾನದಲ್ಲಿ ಶೇ.10ರಷ್ಟು ಕಮಿಷನ್ ಕೊಡಬೇಕು ಎಂದು ಹೇಳಿದ್ದಾರೆ.

ಪಿಎಸ್‍ಐ ಸ್ಕ್ಯಾಮ್‍ನಲ್ಲಿ ಡಿಜಿಪಿ ಜೈಲಿಗೆ ಹೋದರು. ಆದರೆ, ಗೃಹ ಮಂತ್ರಿ ಯಾವುದೇ ನೈತಿಕ ಹೊಣೆ ಹೊರಲು ಸಿದ್ಧರಿಲ್ಲ. ಆ ಸಮಯದಲ್ಲಿ ಬಸವರಾಜ್ ಬೊಮ್ಮಾಯಿ ಅಧಿಕಾರದಲ್ಲಿ ಇದ್ದರು. ರಾಜ್ಯ ಬೊಮ್ಮಾಯಿ ಸರ್ಕಾರ ಎಲ್ಲವನ್ನೂ ಮಾರಾಟಕ್ಕೆ ಇಟ್ಟಿದ್ದಾರೆ. ಬಿಜೆಪಿ ಸರ್ಕಾರದ ಸಚಿವರಾದ ಎಂಟಿಬಿ ನಾಗರಾಜ್ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಸರ್ಕಾರದ ದುರಾಡಳಿತದಿಂದ  ಪ್ರಶಾಂತ್, ಸಂತೋಷ್, ಜೀವವನ್ನು ವಾಪಸ್ ತಂದು ಕೊಡಲು ಸಾಧ್ಯವಿಲ್ಲ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ ಮುಖ್ಯಮಂತ್ರಿ ಹುದ್ದೆ ಸಹ ಮಾರಾಟದ ವಸ್ತು ಆಗಿದೆ ಎಂದು ತಿಳಿಸಿದರು.

''ಜೆಡಿಎಸ್ ಬಿಜೆಪಿ ಪಕ್ಷದ ಬಿ ಟೀಂ'': ಜಾತ್ಯಾತೀತ ಜನತಾದಳ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ಏಕೆ ವಿರೋಧ ಮಾಡಲಿಲ್ಲ. ರೈತರ ಬೆನ್ನಿಗೆ ಚೂರಿ ಹಾಕಿದಂತೆ ಜೆಡಿಎಸ್ ಮಾಡಿದೆ. ಅಲ್ಪಸಂಖ್ಯಾತರ ವಿರುದ್ಧದ ಕಾಯ್ದೆ  ಬಗ್ಗೆ ಏಕೆ ಜೆಡಿಎಸ್ ವಿರೋಧ ಮಾಡಲಿಲ್ಲ. ಮೈಸೂರು ನಗರದ ಮೇಯರ್ ಆಯ್ಕೆಯಲ್ಲಿ ಜೆಡಿಎಸ್ ಪಕ್ಷದ ಹೊಂದಾಣಿಕೆಯಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ. ಉಪ ರಾಷ್ಟ್ರಪತಿ ಆಯ್ಕೆಯಲ್ಲಿ ಮಾರ್ಗರೇಟ್ ಆಳ್ವಾರ ವಿರುದ್ದವಾಗಿ ಮತ ಚಲಾಯಿಸಿದರು. ಮೋದಿ ಮುಖವಾಡವನ್ನು ಜೆಡಿಎಸ್ ಹೊಂದಿದ್ದು, ಮತ ಬೇಕಾದಾಗ ಎಸ್.ಸಿ, ಎಸ್.ಟಿ, ಒಬಿಸಿ ಬೇಕು. ನಂತರ ಮೋದಿ ಬೇಕು ಕರ್ನಾಟಕದ ಮತದಾರರು ಕಾಂಗ್ರೆಸ್ ಪಕ್ಷದ ಜೊತೆ ನಿಲ್ಲಬೇಕು ಎಂದರು.

ಅಶ್ವಥ್ ನಾರಾಯಣ್ ಮಂಡ್ಯದಲ್ಲಿ ಸಿದ್ದರಾಮಯ್ಯರವರನ್ನು ಹತ್ಯೆ ಮಾಡಬೇಕು ಎಂದು ಮಾತನಾಡುತ್ತಾರೆ. ಇದು ಅಶ್ವತ್ಥನಾರಾಯಣ ಹೇಳುತ್ತಿರುವುದಲ್ಲ ಇದು ಮೋದಿ, ಅಮಿತ್ ಶಾರವರ ಮಾತುಗಳಾಗಿವೆ. ಸಿದ್ದರಾಮಯ್ಯರವರು ಜನ ಸಾಮಾನ್ಯರ ಸಂಕಷ್ಟಕ್ಕೆ ನಿಲ್ಲುತ್ತಿದ್ದಾರೆ ಎಂದು ಹತ್ಯೆ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಇತಿಹಾಸವೇ ತ್ಯಾಗಬಲಿದಾನ ಸಂಕೇತ. ಅಂದು ಗೋಡ್ಸೆ, ಇಂದು ಅಶ್ವಥ್ ನಾರಾಯಣ್. ಮಹಾತ್ಮ ಗಾಂಧಿ ಶರೀರ ಇಲ್ಲದಿರಬಹುದು ಆದರೆ ಆತ್ಮ ಇದೆ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಮಧ್ಯಪ್ರದೇಶ ಹಾಗೂ ಪಂಜಾಬ್ ರಾಜ್ಯದ ಮುಖ್ಯಮಂತ್ರಿಗಳನ್ನು ಸಹ ಹತ್ಯೆ ಮಾಡಲಾಯಿತು. ಇವಾಗ ಸಿದ್ದರಾಮಯ್ಯರವರನ್ನು ಹತ್ಯೆ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆಂದು ಹೇಳಿದರು.

ರಾಜ್ಯದ ಬಡಜನರ ಅಭಿವೃದ್ಧಿಗೆ ಈ ಗ್ಯಾರೆಂಟಿ ಕಾರ್ಡ್‍ಅನ್ನು ಸಿದ್ದರಾಮಯ್ಯರ ಮತ್ತು ಡಿ.ಕೆ.ಶಿವಕುಮಾರ್ ಅವರ ಸಹಿ ಯೊಂದಿಗೆ ಗ್ಯಾರೆಂಟಿ ಕೊಡುತ್ತಾ ಇದ್ದೇವೆ, ಇದು ಬಿಜೆಪಿ ಪಕ್ಷಕ್ಕೆ ಸಹಿಸಲು ಆಗುತ್ತಾ ಇಲ್ಲ. ಈ ಗ್ಯಾರೆಂಟಿ ಕಾರ್ಡನ್ನು ರಾಜ್ಯದ ಪ್ರತಿಯೊಂದು ಮನೆ ಮನೆಗಳಲ್ಲಿ ಕಾಂಗ್ರೆಸ್ ತಲುಪಿಸುತ್ತದೆ. ರಾಜ್ಯದ ಯಾವುದೇ ವರ್ಗ, ಜಾತಿ, ಧರ್ಮಕ್ಕೆ ಸೇರಿದ ಜನರಿಗೆ ತಲುಪಿಸಿ. ಶ್ರೀಮಂತ ವರ್ಗದವರು ಸುಮಾರು ಶೇ.5ರಿಂದ ಶೇ.10ರಷ್ಟು ಜನರು ಬೇಡ ಎಂದು ಹೇಳಬಹುದು. ಇಂತಹ ಯೋಜನೆಯನ್ನು ಜಾರಿ ಮಾಡಲು ಅನುದಾನ ಶೇ.40 ಕಮಿಷನ್ ಕಾಂಗ್ರೆಸ್ ಪಕ್ಷ ಪಡೆಯಲ್ಲ ಎಂದು ತಿಳಿಸಿದರು.

ಎಐಸಿಸಿ ಕಾರ್ಯದರ್ಶಿ  ರೋಸಿಜಾನ್, ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹಮದ್, ಜಿಲ್ಲಾಧ್ಯಕ್ಷ ಡಾ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ವಾಸು, ಕಾಂಗ್ರೆಸ್ ಮುಖಂಡರಾದ ಸೂರಜ್ ಹೆಗಡೆ, ಸುಜೀದ್ರ , ಚಂದ್ರಮೌಳಿ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರ್‍ನಾಥ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ರಾಮಪ್ಪ, ಮಂಜುಳಾ ರಾಜ್, ಕೆ.ಆರ್.ನಗರ ಆಕಾಂಕ್ಷಿ ಡಿ.ರವಿಶಂಕರ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮರಿಗೌಡ, ವಕ್ತಾರ ಹೆಚ್.ಎ.ವೆಂಕಟೇಶ್, ಮಾಜಿ ಮಹಾಪೌರರಾದ ಅಯೂಬ್ ಖಾನ್ ಇನ್ನಿತರರು ಉಪಸ್ಥಿತರಿದ್ದರು.

Similar News