ಮೈ ಮರೆತು ಕಾಂಗ್ರೆಸ್‍ಗೆ ಮತ ನೀಡಿದರೆ ತಾಲಿಬಾನ್ ಸರಕಾರ ಬರುತ್ತೆ: ಹೇಳಿಕೆ ಸಮರ್ಥಿಸಿದ ಪ್ರತಾಪ್‌ ಸಿಂಹ

Update: 2023-02-24 16:08 GMT

ಮೈಸೂರು,ಫೆ.24: 'ಮುಂಬರುವ ವಿಧಾನಸಭಾ  ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮತ ಹಾಕಿದರೆ ತಾಲಿಬಾನ್ ಸರಕಾರ ಬರುತ್ತದೆ. ಕಪಾಲಿ ಬೆಟ್ಟವನ್ನು ಯೇಸು ಬೆಟ್ಟವನ್ನಾಗಿ ಮಾಡುತ್ತಾರೆ' ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ಸಿದ್ದರಾಮಯ್ಯ ಅವರ ಆಡಳಿತದ ಅವಧಿಯಲ್ಲಿ  ಪಿಎಫ್‍ಐ ಮತ್ತು ಕೆಎಫ್‍ಡಿಯ 1,600 ಸಮಾಜಘಾತುಕ ಶಕ್ತಿಗಳ ವಿರುದ್ಧ ಇದ್ದ ಸುಮಾರು 175 ಕ್ರಿಮಿನಲ್ ಪ್ರಕರಣಗಳನ್ನು ಪೊಲೀಸ್ ಇಲಾಖೆಯ ವಿರೋಧದ ನಡುವೆಯೂ ಸಚಿವ ಸಂಪುಟದ ಮುಂದಿಟ್ಟು ಪ್ರಕರಣ ವಾಪಸ್ ಪಡೆದರು. ಆ ಕಾರಣದಿಂದಲೇ ಮೈ ಮರೆತು ಕಾಂಗ್ರೆಸ್‍ಗೆ ಮತ ನೀಡಿದರೆ ತಾಲಿಬಾನ್ ಸರ್ಕಾರ ಬರುತ್ತದೆ ಎಂದು ನಾನು ನಿನ್ನೆ ಕಾಂಗ್ರೆಸ್ ಕುರಿತು ಹೇಳಿಕೆ ನೀಡಿದ್ದೇನೆ' ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮುಂದಿನ ಮಾರ್ಚ್ ತಿಂಗಳ 11 ಅಥವಾ 12 ರಂದು ಬೆಂಗಳೂರು-ಮೈಸೂರು ನಡುವಿನ ಎಕ್ಸ್ ಪ್ರೆಸ್ ಹೈವೇಯನ್ನು ಮಂಡ್ಯದ ಬಳಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಅದೇ ದಿನ ಮೈಸೂರು-ಕುಶಾಲನಗರ ಹೆದ್ದಾರಿಗೂ ಗುದ್ದಲಿ ಪೂಜೆ ಆಗಲಿದೆ. ಹೆದ್ದಾರಿ  ವಿಚಾರದಲ್ಲಿ ಮಂಡ್ಯದಲ್ಲಿ ನಮ್ಮ ಜನಪ್ರತಿನಿಧಿಗಳು ಇಲ್ಲದೆ ಇದ್ದರೂ ಯಾವುದೇ ತಾರತಮ್ಯ ಮಾಡಿಲ್ಲ. ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದೇವೆ. ಬೆಂಗಳೂರು-ಮೈಸೂರು ನಡುವಿನ ಎಕ್ಸ್‍ಪ್ರೆಸ್ ಹೈವೇಗೆ ವ್ಯಕ್ತಿಯ ಹೆಸರು ಇಡುವ ಬದಲು ದಕ್ಷಿಣ ಭಾರತದ ಜೀವನದಿ ಕಾವೇರಿಯ ಹೆಸರನ್ನು ಅಂದರೆ ಕಾವೇರಿ ಎಕ್ಸ್ ಪ್ರೆಸ್ ಎಂದು ಹೆಸರಿಡಲು ಎಲ್ಲರ ಸಹಕಾರ ಕೇಳುತ್ತೇನೆ ಎಂದು ಮನವಿ ಮಾಡಿದರು.

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಮೊದಲ ಹಂತದಲ್ಲಿ 150 ಕೋಟಿ ಹಣ ಬಿಡುಗಡೆ ಆಗಿದ್ದು, ಶೀಘ್ರವೇ ಭೂಮಿ ಪೂಜೆ ಮಾಡಲಾಗುವುದು. ಒಟ್ಟು ವಿಸ್ತರಣೆಗೆ 160 ಎಕರೆ ಜಾಗಬೇಕು. ಅದರಲ್ಲಿ ಕೇವಲ 47 ಎಕರೆ ನೋಟಿಫಿಕೇಷನ್ ಆಗಿದೆ. ವಿಮಾನ ನಿಲ್ದಾಣದ ಮುಂಭಾಗದಲ್ಲಿ ಬರುವ ಮೈಸೂರು ಮತ್ತು ನಂಜನಗೂಡು  ನಡುವಿನ ಹೆದ್ದಾರಿಯನ್ನು ಡೈವರ್ಟ್ ಮಾಡಲಾಗುವುದು ಎಂದು ತಿಳಿಸಿದರು.

Similar News