'ಸಾಕಪ್ಪಾ ಸಾಕು!': ಬಿಜೆಪಿ ವಿರುದ್ಧ ಕಾಂಗ್ರೆಸ್‌ನಿಂದ ಪೋಸ್ಟರ್ ಅಭಿಯಾನ

Update: 2023-02-25 17:38 GMT

ಶಿವಮೊಗ್ಗ,ಫೆ.25:  'ಸಾಕಪ್ಪಾ ಸಾಕು ಬಿಜೆಪಿ ಸಹವಾಸ ಸಾಕು', 'ಗೋ ಬ್ಯಾಕ್ ಬಿಜೆಪಿ' ಎಂಬ ಘೋಷಣೆಗಳೊಂದಿಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮೆಗ್ಗಾನ್ ಆಸ್ಪತ್ರೆ ಎದುರಿನ ಪೊಲೀಸ್ ಕ್ಯಾಂಟೀನ್ ಬಳಿ ಪೋಸ್ಟರ್ ಅಭಿಯಾನದ ಮೂಲಕ ಪ್ರತಿಭಟನೆ ನಡೆಸಿದರು. 

ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರ ಕಿವಿಗೆ ಹೂವು ಮುಡಿಸುವ ಕೆಲಸದಲ್ಲಿ ಬಿಜೆಪಿ ತೊಡಗಿದೆ. ಭ್ರಷ್ಟಾಚಾರದ ಸರಕಾರವಿದು. ಇವರ ಸಾಧನೆಯೆಂದರೆ ಶೇ.40ರಷ್ಟು ಕಮಿಷನ್ ಪಡೆಯುವುದು. ಜನರು ಬೇಸತ್ತು ಹೋಗಿದ್ದಾರೆ. ಬಿಜೆಪಿ ಸರಕಾರ ರಾಜ್ಯ ಮತ್ತು ರಾಷ್ಟ್ರದಿಂದ ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯೇ ಭರವಸೆ ಎಂಬ ಪೋಸ್ಟರ್‌ಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಕಿವಿಗೆ ಹೂವು ಇಡುವ ಪೋಸ್ಟರ್‌ಗಳನ್ನು ಅಂಟಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕೆ.ಬಿ.ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಎನ್.ರಮೇಶ್, ಎಸ್.ಕೆ.ಮರಿಯಪ್ಪ, ಎಚ್.ಸಿ ಯೋಗೀಶ್, ಡಿ.ಕೃಷ್ಣಪ್ಪ, ಚಂದ್ರಶೇಖರ್, ಕಲೀಂ ಪಾಷಾ, ದೀಪಕ್ ಸಿಂಗ್, ಜಿ.ಡಿ. ಮಂಜುನಾಥ್, ಕಲಗೋಡು ರತ್ನಾಕರ್, ಇಕ್ಕೇರಿ ರಮೇಶ್, ವೈ.ಎಚ್. ನಾಗರಾಜ್, ಮಂಜುನಾಥ ಬಾಬು, ಸುವರ್ಣಾ ನಾಗರಾಜ್, ಎಚ್.ಪಿ.ಗಿರೀಶ್, ಸ್ಟೆಲ್ಲಾ ಮಾರ್ಟಿನ್ ಮತ್ತಿತರರಿದ್ದರು.

Similar News