×
Ad

ಕರ್ನಾಟಕದ ವಿಚಾರದಲ್ಲಿ ಸುಳ್ಳು ಹೇಳಿರುವ ಮೋದಿ ಜನರ ಕ್ಷಮೆ ಕೇಳಬೇಕು: ಸಿದ್ದರಾಮಯ್ಯ

''ರಾಜ್ಯದ ಪಾಲಿನ ಅನುದಾನ ನ್ಯಾಯಯುತವಾಗಿ ನೀಡಬೇಕು''

Update: 2023-02-27 17:43 IST

ಬೆಂಗಳೂರು, ಫೆ. 27: ‘ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶದ ಕೆಲಸ ಮಾಡುವುದನ್ನು ಬಿಟ್ಟು ಕೇವಲ ಬಿಜೆಪಿಯ ಚುನಾವಣಾ ಏಜೆಂಟರಾಗಿ ದುಡಿಯುತ್ತಿದ್ದಾರೆ. ರಾಜ್ಯದ ಜನರಿಂದ ದೋಚಿಕೊಂಡ ಸಂಪತ್ತನ್ನು ಪ್ರವಾಹ, ಬರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ, ಜನರ ಕಲ್ಯಾಣಕ್ಕೆ ಖರ್ಚು ಮಾಡುವ ಬದಲು ಚುನಾವಣಾ ಪ್ರಚಾರಗಳಿಗೆ ಖರ್ಚು ಮಾಡುತ್ತಿದ್ದಾರೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟನೆ ಬಿಡುಗಡೆ ಮಾಡಿರುವ ಅವರು, ‘ಕರ್ನಾಟಕದ ಈರುಳ್ಳಿ, ಅರಿಶಿನ, ತೆಂಗು, ಅಡಿಕೆ, ಮೆಣಸು, ತೊಗರಿ, ಭತ್ತ, ರಾಗಿ, ಜೋಳ ಮುಂತಾದ ಬೆಳೆಗಳನ್ನು ಬೆಳೆಯುವ ರೈತರು ಬೆಲೆಯಿಲ್ಲದೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೆ ಇವರ ಸಂಕಷ್ಟ ಪರಿಹರಿಸಲು ಸೂಕ್ತ ಪರಿಹಾರದ ಪ್ಯಾಕೇಜನ್ನು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ದೇಶದ ಕೆಲಸ ಬಿಟ್ಟು BJP ಚುನಾವಣಾ ಏಜೆಂಟರಾಗಿ ದುಡಿಯುತ್ತಿರುವ ಮೋದಿ, ಅಮಿತ್ ಶಾ: ಸಿದ್ದರಾಮಯ್ಯ ವಾಗ್ದಾಳಿ

‘ಹಾಗೆಯೆ ಕರ್ನಾಟಕದ ರಸ್ತೆಗಳ ಟೋಲ್‍ಗಳಲ್ಲಿ ದರಗಳು ಕೆಲವೇ ದಿನಗಳಲ್ಲಿ ಎರಡು ಪಟ್ಟು ಮೂರು ಪಟ್ಟು ಹೆಚ್ಚಾಗಿವೆ. ಅವುಗಳನ್ನು ಕೂಡಲೆ ರದ್ದು ಮಾಡಬೇಕು. ಸರಕಾರದ ಭ್ರಷ್ಟಾಚಾರ ತೀವ್ರವಾಗುತ್ತಲೆ ಇದೆ. ಅದರ ಕುರಿತು ಸೂಕ್ತ ತನಿಖೆಗೆ ವಹಿಸಬೇಕು’ ಎಂದು ಆಗ್ರಹಿಸಿರುವ ಅವರು, ‘ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವ ಧೈರ್ಯ ಮಾಡಿಲ್ಲ ನೀವು. ರಸ್ತೆ, ರೈಲ್ವೆ ಹಾಗೂ ತೆರಿಗೆ ಪಾಲಿನ ಕುರಿತು ಮಾತ್ರ ಮಾತನಾಡಿದ್ದೀರಿ. ಅದನ್ನೂ ಬ್ರಹ್ಮಾಂಡದಷ್ಟು ಸುಳ್ಳು ಹೇಳಿದ್ದೀರಿ’ ಎಂದು ಆರೋಪಿಸಿದ್ದಾರೆ.

‘ಮೋದಿ ಸರಕಾರವು ರಾಜ್ಯದಿಂದ 4.75 ಲಕ್ಷ ಕೋಟಿ ರೂ.ಗಳಷ್ಟು ಸಂಪತ್ತನ್ನು ದೋಚಿಕೊಂಡು ಕೇವಲ 37ಸಾವಿರ ಕೋಟಿ ರೂ.ತೆರಿಗೆ ಪಾಲು ಕೊಡುತ್ತಿದೆ, ಇದು ಅನ್ಯಾಯವೆಂದು ಪ್ರತಿಭಟಿಸಿದ್ದೆ ಹಾಗೂ ಈ ಕುರಿತು ದಾಖಲೆಗಳನ್ನು ಒದಗಿಸಿದ್ದೆ. ಎಂದೂ ಉಸಿರೆ ಬಿಡದಿದ್ದ ಮೋದಿ ಇತ್ತೀಚೆಗೆ ದಿಲ್ಲಿಯ ಕರ್ನಾಟಕ ಭವನದ ಅಮೃತ ಮಹೋತ್ಸಹ ಕಾರ್ಯಕ್ರಮದಲ್ಲಿ ತಾವು ಕರ್ನಾಟಕದ ರೈಲ್ವೆಗೆ, ಹೆದ್ದಾರಿ ಯೋಜನೆಗಳಿಗೆ ಬಹಳ ಅನುದಾನ ಕೊಟ್ಟಿದ್ದೇವೆ ಹಾಗೂ ಅನುದಾನ ಹೆಚ್ಚಿಸಿದ್ದೇವೆ, ಮನಮೋಹನಸಿಂಗ್ ನೇತೃತ್ವದ ಯುಪಿಎ ಸರಕಾರಕ್ಕಿಂತ ಎಷ್ಟೊ ಪಾಲು ಹೆಚ್ಚು ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರಕಾರ ಅಧಿಕೃತವಾಗಿ ಪ್ರಕಟಿಸಿರುವ ದಾಖಲೆಗಳಂತೆ, 2005ರಿಂದ 2014ರ ಮಾರ್ಚ್ ವರೆಗೆ 9 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕರ್ನಾಟಕದಲ್ಲಿ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ ಉದ್ದ 2334 ಕಿಮೀಗಳು. ಮೋದಿ ನೇತೃತ್ವದ ಬಿಜೆಪಿ ಸರಕಾರ 2014ರಿಂದ 2022ರ ವರೆಗೆ ನಿರ್ಮಿಸಿದ ಒಟ್ಟು ರಾಷ್ಟ್ರೀಯ ಹೆದ್ದಾರಿ ಉದ್ದ ಕೇವಲ 1,479 ಕಿಮೀ. ರೈಲ್ವೆ ವಿಚಾರಕ್ಕೆ ಬಂದರೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ತನ್ನ 9 ವರ್ಷಗಳಲ್ಲಿ 301 ಕಿಮೀ ರೈಲ್ವೆಯನ್ನು ನಿರ್ಮಿಸಿತ್ತು. ಮೋದಿಯವರ ಸರಕಾರ 291 ಕಿಮೀಗಳಷ್ಟು ಮಾತ್ರ ನಿರ್ಮಿಸಿದೆ. ರಾಜ್ಯದಲ್ಲಿ ಸುಮಾರು 18ರೈಲ್ವೆ ಯೋಜನೆಗಳು ಚಾಲ್ತಿಯಲ್ಲಿವೆ. ಇವುಗಳಿಗೆ 14-15 ಸಾವಿರ ಕೋಟಿ ರೂ.ಹಣ ಬೇಕು. ಈ ಯೋಜನೆಗಳಲ್ಲಿ ತುಮಕೂರು ರಾಯದುರ್ಗ, ತುಮಕೂರು-ದಾವಣಗೆರೆ ಮಾರ್ಗಗಳೂ ಸೇರಿವೆ. ಈ ಯೋಜನೆಗಳನ್ನು ಮನಮೋಹನಸಿಂಗರು ಕೊಟ್ಟ ಕೊಡುಗೆಗಳಾಗಿವೆ ಎಂದು ಟೀಕಿಸಿದ್ದಾರೆ.

2023-24ರಲ್ಲಿ ಕೇಂದ್ರದ ಬಜೆಟ್ ಗಾತ್ರ 45.01ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ ರಾಜ್ಯಕ್ಕೆ ಬರಬಹುದೆಂದು ಅಂದಾಜು ಮಾಡಿರುವುದು 49 ಸಾವಿರ ಕೋಟಿ ರೂ.ಮಾತ್ರ. ಬಜೆಟ್ ಗಾತ್ರ ಸುಮಾರು 3 ಪಟ್ಟು ಹೆಚ್ಚಾಗಿದೆ, ಅದರ ಲೆಕ್ಕದಲ್ಲಿ ನೋಡಿದರೂ ನಮ್ಮ ರಾಜ್ಯದ 85-90 ಸಾವಿರ ಕೋಟಿ ರೂ. ಇರಬೇಕಿತ್ತಲ್ಲವೆ ಮೋದೀಜಿಯವರೆ? ಸತ್ಯ ಇಷ್ಟು ಸೂರ್ಯ ಸ್ಪಷ್ಟವಾಗಿರುವಾಗ ಯಾಕೆ ಸುಳ್ಳು ಹೇಳಿ ಕರ್ನಾಟಕದ ಮರ್ಯಾದಸ್ಥ ಜನರ ಕಿವಿಯ ಮೇಲೆ ಹೂಗಳನ್ನಿಡಲು ಪ್ರಯತ್ನಿಸುತ್ತೀರಿ? ಈ ಮಟ್ಟದ ಸುಳ್ಳುಗಳು ನಿಮ್ಮ ಪದವಿಗೆ ಯೋಗ್ಯವೆ?’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರ ತೆರಿಗೆ ಎಂದು ಸಂಗ್ರಹಿಸಿದರೆ ಪಾಲು ಕೊಡಬೇಕಾಗುತ್ತದೆಂಬ ದುಷ್ಟ ಉದ್ದೇಶದಿಂದ ಸೆಸ್‍ಗಳ ಹೆಸರಿನಲ್ಲಿ ವರ್ಷಕ್ಕೆ 35ಸಾವಿರ ಕೋಟಿ ರೂ.ಸಂಗ್ರಹಿಸಿದಿರಿ. ಮೊದಲು ರಾಜ್ಯವೆ ತೆರಿಗೆ ಸಂಗ್ರಹಿಸಿ ನಾವೆ ಖರ್ಚು ಮಾಡುತ್ತಿದ್ದೆವು. ಈಗ ಜಿಎಸ್‍ಟಿ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ. ಆದರೂ ನಮಗೆ ಸಮರ್ಪಕ ಪಾಲು ಕೊಡದೆ ದ್ರೋಹ ಮಾಡಲಾಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ 9 ವರ್ಷಗಳ ಆಡಳಿತದಲ್ಲಿ ಗುಜರಾತ್‍ನಲ್ಲಿ 3,191 ಕಿಮೀ, ಉತ್ತರಪ್ರದೇಶದಲ್ಲಿ 4,259 ಕಿಮೀ, ಮಹಾರಾಷ್ಟ್ರದಲ್ಲಿ 12,069 ಕಿಮೀ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ನಿರ್ಮಿಸಿದ್ದೆಷ್ಟು? 1,479 ಕಿಮೀ ಮಾತ್ರ. ಇಷ್ಟು ಅನ್ಯಾಯ ಮಾಡಿದರೂ ಕರ್ನಾಟಕಕ್ಕೆ ಕಿರೀಟ ತೊಡಿಸಿದ್ದೇವೆ ಎಂದು ಸುಳ್ಳು ಹೇಳುವುದು ನಿಮ್ಮ ಹುದ್ದೆಗೆ ಶೋಭೆ ತರುವುದೆ ಮೋದೀಜಿಯವರೆ?’ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.

Similar News