ನಂದಿಬೆಟ್ಟಕ್ಕೆ ರೋಪ್ ವೇ | 15 ದಿನದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ: ಸಚಿವ ಆನಂದ್ ಸಿಂಗ್

‘ದಕ್ಷಿಣ ಕನ್ನಡ ಜಿಲ್ಲೆ ಸಸಿಹಿತ್ಲು ಕಡಲತೀರದಲ್ಲಿ 7.50ಕೋಟಿ ರೂ.ವೆಚ್ಚದಲ್ಲಿ ಸರ್ಫಿಂಗ್ ಸ್ಕೂಲ್’ ► 'ಜೆಎಲ್‌ಆರ್‌ನಿಂದ ರಾಜ್ಯದ 4 ಕಡೆ ನೂತನ ರೆಸಾರ್ಟ್ ನಿರ್ಮಾಣ'

Update: 2023-02-28 14:43 GMT

ಬೆಂಗಳೂರು, ಫೆ. 28: ಇನ್ನೂ ಹದಿನೈದು ದಿನದಲ್ಲಿ ‘ನಂದಿಬೆಟ್ಟದ ರೋಪ್ ವೇ’ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ 98 ಕೋಟಿ ರೂ.ವೆಚ್ಚದ ಕಾಮಗಾರಿ ಕೈಗೊಳ್ಳಲಾಗುತ್ತದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. 

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಂದಿಬೆಟ್ಟಕ್ಕೆ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ರೋಪ್ ವೇ ನಿರ್ಮಾಣದಿಂದ ಅನುಕೂಲವಾಗಲಿದೆ. ಖಾಸಗಿ ಸಂಸ್ಥೆ ಅತ್ಯಾಧುನಿಕ ತಂತ್ರಜ್ಞಾನದ ರೋಪ್ ವೇ ನಿರ್ಮಾಣದ ಹೊಣೆ ಹೊತ್ತಿದೆ ಎಂದು ವಿವರ ನೀಡಿದರು.

15 ಕೋಟಿ ರೂ.ಲಾಭ: ‘ಪ್ರ್ರವಾಸೋದ್ಯಮ ಇಲಾಖೆ ಕೈಗೊಂಡ ಪೂರಕ ಕ್ರಮದಿಂದಾಗಿ ಕೋವಿಡ್ ಬಳಿಕ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ(ಜೆಎಲ್‍ಆರ್) ಚೇತರಿಸಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ 15 ಕೋಟಿ ರೂ. ಲಾಭಗಳಿಸಿದೆ. ಇಲಾಖೆ ಕೋವಿಡ್ ಸುರಕ್ಷಿತ ಕ್ರಮ ಕೈಗೊಂಡು ಪ್ರವಾಸಿಗರಲ್ಲಿ ವಿಶ್ವಾಸ ಮೂಡಿಸಲಾಗಿತ್ತು. ಪರಿಣಾಮ ಜೆಎಲ್‍ಆರ್ ಸಂಸ್ಥೆ ಪುನಃ ಲಾಭದತ್ತ ಮರಳಿದೆ’ ಎಂದು ಅವರು ತಿಳಿಸಿದರು.

‘2022-23ನೆ ಸಾಲಿನಲ್ಲಿ ಜೆಎಲ್‍ಆರ್ ಸಂಸ್ಥೆ 98.20ಕೋಟಿ ರೂ.ವಹಿವಾಟು ನಡೆಸಿದ್ದು, 15 ಕೋಟಿ ರೂ.ಗಳಷ್ಟು ಲಾಭಗಳಿಸಿದೆ ಎಂದ ಅವರು, ಸಂಸ್ಥೆ ವತಿಯಿಂದ ನೂತನವಾಗಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ  ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಆನಂದ್ ಸಿಂಗ್ ಇದೇ ವೇಳ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲು ಕಡಲತೀರದಲ್ಲಿ ಅಂದಾಜು 7.50 ಕೋಟಿ ರೂ.ವೆಚ್ಚದಲ್ಲಿ ಸರ್ಫಿಂಗ್ ಸ್ಕೂಲ್, ರೆಸಾರ್ಟ್, ವಾಟರ್ ಸ್ಪೋಟ್ರ್ಸ್ ಮತ್ತು ರೆಸ್ಟೋರೆಂಟ್, 2.08ಕೋಟಿ ವೆಚ್ಚದಲ್ಲಿ ಕಲ್ಬುರ್ಗಿಯ ಚಿಂಚೋಳಿ ವನ್ಯಜೀವಿ ಅಭಯಾರಣ್ಯದಲ್ಲಿ ರೆಸಾರ್ಟ್, ವಾಟರ್ ಸ್ಪೋಟ್ರ್ಸ್, ಟ್ರೆಕ್ಕಿಂಗ್, 17.13 ಕೋಟಿ ರೂ.ವೆಚ್ಚದಲ್ಲಿ ಶಿವಮೊಗ್ಗ ಸಕ್ರೆಬೈಲಿನಲ್ಲಿ ಜೈವಿಕ ಉದ್ಯಾನವ ಅಭಿವೃದ್ಧಿ, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಒತ್ತಿನ್ನಾಣಿಯಲ್ಲಿ ಕಾಟೇಜ್‍ಗಳ ನಿರ್ಮಾಣ ಹಾಗೂ ರಾಮನಗರದ ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದ ಬಳಿ 10 ಎಕರೆ ಜಾಗದಲ್ಲಿ ಸಂಸ್ಥೆಯಿಂದ ಕಾಟೇಜ್, ವಾಟರ್ ಸ್ಪೋಟ್ರ್ಸ್, ರೆಸ್ಟೋರೆಂಟ್, ಟ್ರೆಕ್ಕಿಂಗ್, ಮೌಂಟನ್ ಕ್ಲೈಂಬಿಂಗ್ ಮತ್ತು ರಾಕ್ ಕ್ಲೈಂಬಿಂಗ್ ನಿರ್ಮಿಸಲಾಗುತ್ತದೆ ಎಂದು ಹೇಳಿದರು. 

ಪ್ರವಾಸೋದ್ಯಮ ಇಲಾಖೆ, ಕೆಎಸ್‍ಟಿಡಿಸಿ ಹಾಗೂ ಜೆಎಲ್‍ಆರ್ ಸಂಸ್ಥೆಗಳು ಸ್ವಂತ ಕಟ್ಟಡ ಹೊಂದಿಲ್ಲದ ಕಾರಣ ಪ್ರತಿ ವರ್ಷ ಆರು ಕೋಟಿ ರೂ.ಕಟ್ಟಡಕ್ಕೆ ಬಾಡಿಗೆ ಪಾವತಿಸಲಾಗುತ್ತಿದೆ. ಇದನ್ನು ತಡೆಯುವ ಸಲುವಾಗಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಹಲಸೂರಿನಲ್ಲಿ 12.36ಕೋಟಿ ರೂ.ವೆಚ್ಚದಲ್ಲಿ ಜಾಗ ಖರೀಸಲಾಗಿದ್ದು, ‘ಪ್ರವಾಸಿ ಸೌಧ’ ನಿರ್ಮಿಸಲಾಗುವುದು. ಈ ಮೂಲಕ ಪ್ರವಾಸೋದ್ಯಮ ನಿರ್ದೇಶನಾಲಯ, ಕೆಎಸ್‍ಟಿಡಿಸಿ, ಕೆಟಿಐಎಲ್ ಮತ್ತು ಜೆಎಲ್‍ಆರ್ ಕಚೇರಿಗಳನ್ನು ಒಂದೆ ಸೂರಿನಡಿ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದರು.

‘ಅಲ್ಲದೆ, ಸದರಿ ಕಟ್ಟಡದಲ್ಲಿ ರಾಜ್ಯದ ಪ್ರವಾಸಕ್ಕಾಗಿ ಆಗಮಿಸುವ ಪ್ರವಾಸಿಗರಿಗೆ ಕೈಮಗ್ಗ ನೇಕಾರರು ತಯಾರಿಸಿದ ವಸ್ತುಗಳು, ಮೈಸೂರು ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಮತ್ತು ಕರಕುಶಲ ನಿಗಮದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ಅವರು ವಿವರಿಸಿದರು.

ಹೆಲಿಟೂರಿಸಂ: ‘ಸಂಸ್ಥೆಯ ರೆಸಾಟ್ರ್ಸ್‍ಗಳಿಗೆ ಭೇಟಿ ನೀಡುವ ಅತಿಥಿಗಳಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣದ ಸೇವೆ ಒದಗಿಸಲು ಮೆ.ಫ್ಲೈ ಬ್ಲೇಡ್ ಸಂಸ್ಥೆಯೊಂದಿಗೆ 2 ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಜೆಎಲ್‍ಆರ್‍ನಲ್ಲಿ ವಾಸ್ತವ್ಯ ಹೂಡುವ ಹೆಲಿಕಾಪ್ಟರ್ ಸೇವೆ ಪಡೆಯುವ ಅತಿಥಿಗಳಿಗೆ ಸಂಸ್ಥೆ ಪ್ರಯಾಣ ದರದಲ್ಲಿ ರಿಯಾಯಿತಿ ಸಿಗಲಿದೆ ಎಂದು ಅವರು ನುಡಿದರು. 

ಜೆಎಲ್‍ಆರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಯಂ ಹಾಗೂ ಗುತ್ತಿಗೆ ನೌಕರರು ಹಾಗೂ ಕುಟುಂಬ ಸದಸ್ಯರಿಗೆ ಎಂಟು ಲಕ್ಷ ರೂ.ಗಳ ವೈದ್ಯಕೀಯ ವೆಚ್ಚ, 5 ಲಕ್ಷ ರೂ.ಅಪಘಾತ ವಿಮೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ವಿ.ರಾಮ್ ಪ್ರಸಾತ್ ಮನೋಹರ್, ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಜೆಎಲ್‍ಆರ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.   

ಸಿಬ್ಬಂದಿ ಖಾಯಂಗೆ ಕ್ರಮ: ‘ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯಲ್ಲಿ ರಾಜ್ಯದ ವಿವಿಧೆಡೆ ಜೆಎಲ್‍ಆರ್‍ನಲ್ಲಿ 15ರಿಂದ 20 ವರ್ಷಗಳಿಂದ ಇರುವ ನೌಕರರನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ 50 ನೌಕರರನ್ನು ಖಾಯಂ ಮಾಡಲು ಕ್ರಮ ವಹಿಸಲಾಗಿದೆ. 2022-23ನೆಸಾಲಿನಲ್ಲಿ ಸಂಸ್ಥೆ 28 ಖಾಯಂ ನೌಕರರರಿಗೆ ಮುಂಭಡ್ತಿ ನೀಡಲಾಗಿದ್ದು, ಗುತ್ತಿಗೆ ನೌಕರರ ವೇತನ ಹೆಚ್ಚಳ ಮಾಡಲಾಗಿದೆ’

-ಆನಂದ್ ಸಿಂಗ್ ಪ್ರವಾಸೋದ್ಯಮ ಸಚಿವ

Similar News